ಕಳೆದ ಮಳೆಗಾಲದಲ್ಲಿ ಸುರಿದ ಮಹಾಮಳೆಗೆ ರಾಜ್ಯದ ಬಹುತೇಕ ರೈತರು ಸಮಸ್ಯೆಗೆ ಸಿಲುಕಿದರು. ಕಾಫಿ-ರಾಗಿಯೆನ್ನದೆ ಮಲೆನಾಡು-ಬಯಲು ಸೀಮೆಯ ರೈತರು ಬೆಳೆನಷ್ಟ ಅನುಭವಿಸಿದ್ದಾರೆ. ಇದನ್ನು ಮನಗಂಡ ಸರ್ಕಾರ, ಬೆಳೆಗೆ ಅನ್ವಯವಾಗಿ ಬೆಳೆ ಪರಿಹಾರವನ್ನು ಘೋಷಿಸಿತು. ಹಾನಿಯಾದ ಬೆಳೆಯ ಚಿತ್ರಗಳನ್ನು ನವೆಂಬರ್ ತಿಂಗಳಲ್ಲೇ ರೈತರ ಹಣದಿಂದಲೇ ಪ್ರಿಂಟ್ ಮಾಡಿಸಿ, ಸಂಗ್ರಹಿಸಲಾಯಿತು. ನಂತರ ಡಿಸೆಂಬರ್ವೆರೆಗೂ ಮಳೆಯ ಅಬ್ಬರವೇನೂ ಕಡಿಮೆಯಾಗಲಿಲ್ಲ. ಎಷ್ಟೋ ಮಂದಿಯ ಬೆಳೆ ಸಂಪೂರ್ಣವಾಗಿ ಹಾನಿಯಾಯಿತು. ಮತ್ತೊಮ್ಮೆ ಬೆಳೆ ಪರಿಹಾರದ ಘೋಷಣೆಯೂ ನಡೆಯಿತು. ಆದರೆ, ಇಲ್ಲಿಯವರೆಗೂ ಸರ್ಕಾರ ಪರಿಹಾರ ನೀಡಿಲ್ಲ. ಎಲ್ಲಾ ಘೋಷಣೆಗಳಂತೆ ಬೆಳೆ ಪರಿಹಾರವೂ ಘೋಷಣೆಯಾಗಿ ಉಳಿಯಿತೇ ಎಂಬ ಅನುಮಾನ ರೈತರನ್ನು ಕಾಡುತ್ತಿದೆ.