ರೈತರ ಆತ್ಮಹತ್ಯೆಯು ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಆಗಿರುವುದರ ಕುರಿತ ಮುಜಾಪ್ಫರ್ ಅಸ್ಸಾದಿ ಅವರ ಲೇಖನ (ಪ್ರ.ವಾ., ಅ. 13) ಓದಿ ತೀರಾ ನೋವಾಯಿತು. ರೈತನು ದೇಶದ ಬೆನ್ನೆಲುಬು ಎಂಬುದು ಬಾಯಿ ಮಾತಿಗಷ್ಟೇ ಸೀಮಿತ ಎಂಬಂತೆ ಆಗಿದೆ. ರೈತರ ಸರಣಿ ಆತ್ಮಹತ್ಯೆಗಳನ್ನು ಆಳುವ ಸರ್ಕಾರಗಳು ದಾಖಲಿಸದೇ ಇರುವುದು ಜೀವವಿರೋಧಿ ನಡೆ. ಈ ಆತ್ಮಹತ್ಯೆಗಳಿಗೆ ಕ್ಷುಲ್ಲಕ ಕಾರಣಗಳನ್ನು ನೀಡುತ್ತಿರುವುದಂತೂ ಅವರ ಜೀವಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲದಂತಾಗಿರುವುದನ್ನು ತೋರಿಸುತ್ತದೆ. ಇನ್ನು ಕೆಲವು ರಾಜ್ಯ ಸರ್ಕಾರಗಳು ರೈತನ ಆತ್ಮಹತ್ಯೆ ನಡೆದೇ ಇಲ್ಲ ಎಂದು ಬಿಂಬಿಸಲು ಹೊರಟಿರುವುದನ್ನು ನೋಡಿದರೆ, ಪ್ರಭುತ್ವಗಳ ಉದ್ದೇಶ ಏನೆಂಬುದು ಅರ್ಥವಾಗುತ್ತದೆ.
ರೈತರಿಗೆ ಯಾವುದೇ ಅನುದಾನ, ಬೆಂಬಲ ಬೆಲೆಗಿಂತ ಹೆಚ್ಚಾಗಿ ದಲ್ಲಾಳಿರಹಿತ ಉತ್ತಮ ಮಾರುಕಟ್ಟೆ, ಬೆಳೆಗೆ ತಕ್ಕ ಬೆಲೆ, ವಿದ್ಯುತ್, ನೀರು ಹೆಚ್ಚು ಅವಶ್ಯಕ. ಈ ವ್ಯವಸ್ಥೆ ಸಮರ್ಪಕವಾಗಿದ್ದರೆ ರೈತ ಎಂದೆಂದಿಗೂ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಮಾಡಲಾರ.