ಸರ್ಕಾರಿ ಪ್ರಾಥಮಿಕ ಶಾಲೆಗಳ ಪದವೀಧರ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಂಜಿನಿಯರಿಂಗ್ ಪದವೀಧರರಿಗೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದರ ಹಿಂದಿನ ಉದ್ದೇಶ ಒಳ್ಳೆಯದೇ ಇರಬಹುದು. ಆದರೆ, ನಿರ್ಧಾರಕ್ಕೆ ಬರುವ ಮುನ್ನ ಇಂತಹ ಮಹತ್ವದ ವಿಷಯಗಳ ಬಗೆಗೆ ವ್ಯಾಪಕ ಚರ್ಚೆಯಾಗಬೇಕು. ಎಂಜಿನಿಯರಿಂಗ್ ಪದವೀಧರರಿಗೆ ಮಕ್ಕಳ ಮನಃಶಾಸ್ತ್ರದ ಬಗ್ಗೆ ತರಬೇತಿ ಇರುವುದಿಲ್ಲ. ಮಕ್ಕಳ ಕಲಿಕೆಯು ‘ನೋಡಿ ಕಲಿ- ಮಾಡಿ ನಲಿ’ ಪದ್ಧತಿಯ ಮೂಲಕ ನಡೆಯುತ್ತದೆ. ಒಂದಿಷ್ಟು ಮೋಜು, ಒಂದಿಷ್ಟು ಓದಿನ ಮೂಲಕ ಪಠ್ಯಾಂಶವನ್ನು ಶಿಕ್ಷಕರು ಬೋಧಿಸಬೇಕು. ಈ ಕೌಶಲಗಳ ತರಬೇತಿಯು ಎಂಜಿನಿಯರಿಂಗ್ ಪದವಿಯಲ್ಲಿ ಇರುವುದೇ? ಈಗಿರುವ ಶಿಕ್ಷಕರಿಗೇ ಭಾಷೆ, ವಿಜ್ಞಾನ ಮತ್ತು ಗಣಿತದ ಬಗ್ಗೆ ಗುಣಮಟ್ಟದ ತರಬೇತಿ ನೀಡಿದರೆ, ಅವರು ಮತ್ತಷ್ಟು ಸಮರ್ಥರಾಗಿ ಬೋಧಿಸಬಲ್ಲರು.