ಯಲಹಂಕ, ಬೆಂಗಳೂರು ಪೂರ್ವ ಹಾಗೂ ಬೆಂಗಳೂರು ಉತ್ತರ ತಾಲ್ಲೂಕುಗಳಲ್ಲಿನ ಕೋಟ್ಯಂತರ ರೂಪಾಯಿ ಬೆಲೆಬಾಳುವ 37 ಎಕರೆ ಸರ್ಕಾರಿ ಗೋಮಾಳವನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲು ಮುಂದಾಗಿರುವುದು ವರದಿಯಾಗಿದೆ (ಪ್ರ.ವಾ., ಜುಲೈ 26). ಇದು ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ. ರಾಜ್ಯದ ಹಲವು ಗ್ರಾಮಗಳಲ್ಲಿ ಸರ್ಕಾರಿ ಗೋಮಾಳವು ಉಳ್ಳವರ ಕೈಯಲ್ಲಿದೆ. ಗೋಮಾಳದ ಪಕ್ಕದಲ್ಲಿ ಇರುವ ಜಮೀನುದಾರರು ಗೋಮಾಳವನ್ನು ನಿರಂತರವಾಗಿ ಒತ್ತುವರಿ ಮಾಡಿಕೊಳ್ಳುತ್ತಾ ಬಂದಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಹಳ್ಳಿಗಳ ಕಡೆ ಸುಳಿಯುತ್ತಿಲ್ಲ. ಗೋಮಾಳ, ಗೋಕಟ್ಟೆಗಳನ್ನು ರಕ್ಷಣೆ ಮಾಡಬೇಕಾದುದು ಕಂದಾಯ ಇಲಾಖೆಯ ಕರ್ತವ್ಯ. ಆದರೆ ಯಾರಾದರೂ ಇಲಾಖೆಗೆ ದೂರು ಕೊಟ್ಟಾಗ ಮಾತ್ರ ಗೋಮಾಳ ಒತ್ತುವರಿಯಂಥ ಪ್ರಕರಣಗಳು ಬೆಳಕಿಗೆ ಬರುತ್ತವೆ. ಇಲ್ಲವಾದರೆ, ಸಿಕ್ಕಷ್ಟು ವರ್ಷ ಫಸಲು ಬೆಳೆದುಕೊಂಡು, ಉಂಡಷ್ಟೂ ಲಾಭ ಎನ್ನುವಂತೆ ಗೋಮಾಳಗಳ ದುರ್ಬಳಕೆ ಮುಂದುವರಿಯುತ್ತಲೇ ಇರುತ್ತದೆ.