ಬಹುಜನರ ವಿರೋಧವನ್ನು ಪರಿಗಣಿಸಿ ಅಂತೂ ಸರ್ಕಾರವು ಸರ್ಕಾರಿ ಶಾಲೆಗಳ ಮಕ್ಕಳ ಪೋಷಕರಿಂದ ತಿಂಗಳಿಗೆ ₹ 100 ದೇಣಿಗೆ ಸಂಗ್ರಹಿಸುವ ಆದೇಶವನ್ನು ಹಿಂಪಡೆದಿದೆ. ಇದು ಸ್ವಾಗತಾರ್ಹ. ಆದರೆ ‘ಈ ಕುರಿತು ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಇದರಲ್ಲಿ ನನ್ನದಾಗಲೀ ಮುಖ್ಯಮಂತ್ರಿಯದ್ದಾಗಲೀ ಪಾತ್ರವಿಲ್ಲ’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸುತ್ತದೆ! ಇಂಥ ಗಂಭೀರವಾದ ವಿಷಯದಲ್ಲಿ ಸಂಬಂಧಪಟ್ಟ ಸಚಿವರು ಅಥವಾ ಮುಖ್ಯಮಂತ್ರಿಯವರ ಗಮನಕ್ಕೆ ತಾರದೇ ಒಬ್ಬ ಅಧಿಕಾರಿ ಏಕಾಏಕಿ ನಿರ್ಧಾರ ತೆಗೆದುಕೊಂಡು ಆದೇಶ ಹೊರಡಿಸುತ್ತಾರೆಂದರೆ ಅದಕ್ಕಿಂತ ನಾಚಿಕೆಗೇಡು ಇನ್ನೊಂದಿಲ್ಲ. ಅಕಸ್ಮಾತ್ ಹಾಗೇನಾದರೂ ಆಗಿದ್ದರೆ ಆ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳದಿರುವಷ್ಟು ಅಸಹಾಯಕ ಸರ್ಕಾರ ಇದೆ ಎಂದಾದರೆ ಅದಕ್ಕಿಂತ ದೌರ್ಭಾಗ್ಯ ಇನ್ನೊಂದಿಲ್ಲ.