ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಡೆಮಿ ಅಧ್ಯಕ್ಷರ ರಾಜೀನಾಮೆ | ಸಾಹಿತಿಗಳೋ ಆಸ್ಥಾನ ಕವಿಗಳೋ?

Last Updated 30 ಜುಲೈ 2019, 20:08 IST
ಅಕ್ಷರ ಗಾತ್ರ

ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಪ್ರಾಧಿಕಾರ, ಅಕಾಡೆಮಿಗಳ ಅಧ್ಯಕ್ಷರು ರಾಜೀನಾಮೆ ಕೊಟ್ಟು ಅದಕ್ಕೆ ತಾತ್ವಿಕ ಕಾರಣಗಳನ್ನು ನೀಡಿರುವರಾದರೂ ಸಾಮಾನ್ಯ ಜನರಿಗೆ ಈ ಕಾರಣಗಳು ತೃಪ್ತಿಕರ ಎನಿಸುವುದಿಲ್ಲ. ಏಕೆಂದರೆ ಇಂದು ಬಲಶಾಲಿಯಾದ ಯಾವ ರಾಜಕೀಯ ಪಕ್ಷವೂ ತತ್ವ ರಾಜಕಾರಣ ಮಾಡುತ್ತಿಲ್ಲ. ಸರ್ಕಾರಗಳು ಪಲ್ಲಟಗೊಂಡಂತೆ ಸಾಹಿತಿಗಳ ಸ್ಥಾನಮಾನಗಳೂ ಹೀಗೆ ಪಲ್ಲಟಗೊಳ್ಳುತ್ತಾ ಹೋದರೆ ಇವರೇನು ಸಾಹಿತಿಗಳೋ ಅಥವಾ ವಿವಿಧ ರಾಜಕೀಯ ಪಕ್ಷಗಳ ಆಸ್ಥಾನ ಕವಿಗಳೋ ಎಂಬ ಅನುಮಾನ ಜನರಿಗೆ ಮೂಡದಿರದು.

ಸರ್ಕಾರ ಯಾವುದೇ ಇರಲಿ, ಕನ್ನಡದ ಕೆಲಸ ಅಬಾಧಿತವಾಗಿ ನಡೆಯುತ್ತಿರಬೇಕು ಎಂಬ ಬದ್ಧತೆ ತೋರಿಸುವ ಸಾಹಿತಿಗಳ ಅಗತ್ಯ ಇಂದು ಕನ್ನಡಕ್ಕಿದೆ. ಅಕಾಡೆಮಿ, ಪ್ರಾಧಿಕಾರಗಳ ಪದಾಧಿಕಾರಿಗಳನ್ನು ರಾಜಕಾರಣಿಗಳು ತಮ್ಮಿಚ್ಛೆಯಂತೆ ಬದಲಾಯಿಸಲು ಸಾಧ್ಯವಾಗದಂತೆ ಕಟ್ಟುನಿಟ್ಟಾದ ಕಾನೂನನ್ನು ರೂಪಿಸಬೇಕಾಗಿದೆ. ಅಂತಹ ಕಾನೂನು ರೂಪುಗೊಂಡು ಜಾರಿಯಾಗುವವರೆಗೂ ಎಲ್ಲ ಸರ್ಕಾರಿ ಸ್ಥಾನಮಾನಗಳಿಂದ ತಾವು ದೂರವಿರುವ ನಿರ್ಧಾರವನ್ನು ಎಲ್ಲ ಸಾಹಿತಿಗಳೂ ಒಮ್ಮತದಿಂದ ಕೈಗೊಂಡಲ್ಲಿ, ಅದು ನಿಜವಾದ ತಾತ್ವಿಕ ಬದ್ಧತೆಯಾಗುತ್ತದೆ.

ಅಚಲವಾದ ತಾತ್ವಿಕ ನಿಷ್ಠೆಯು ಎಂತಹ ಕೋಮುವಾದಿಯ ಮನಸ್ಸನ್ನೂ ಬದಲಾಯಿಸಬಲ್ಲದು. ಗಾಂಧೀಜಿ ಇಂತಹ ಹೃದಯ ಪರಿವರ್ತನೆಯನ್ನು ನಂಬಿದ್ದರು. ಸಾಹಿತಿಗಳು ಇದಾವುದನ್ನೂ ಮಾಡದೆ, ತಮ್ಮ ಅಧಿಕಾರವು ಪುಢಾರಿಗಳ ರಾಜಕೀಯ ಅಧಿಕಾರವನ್ನು ಅವಲಂಬಿಸಿದೆ ಎಂಬಂತೆ ವರ್ತಿಸಿದರೆ, ಜನರು ರಾಜಕಾರಣಿಗಳ ಮೇಲೆ ನಂಬಿಕೆ ಕಳೆದುಕೊಂಡಂತೆ ಇವರ ಮೇಲಿನ ನಂಬಿಕೆಯನ್ನೂ
ಕಳೆದುಕೊಳ್ಳುತ್ತಾರೆ.

ಡಾ. ಟಿ.ಎನ್.ವಾಸುದೇವಮೂರ್ತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT