ಸರ್ಕಾರ ಯಾವುದೇ ಇರಲಿ, ಕನ್ನಡದ ಕೆಲಸ ಅಬಾಧಿತವಾಗಿ ನಡೆಯುತ್ತಿರಬೇಕು ಎಂಬ ಬದ್ಧತೆ ತೋರಿಸುವ ಸಾಹಿತಿಗಳ ಅಗತ್ಯ ಇಂದು ಕನ್ನಡಕ್ಕಿದೆ. ಅಕಾಡೆಮಿ, ಪ್ರಾಧಿಕಾರಗಳ ಪದಾಧಿಕಾರಿಗಳನ್ನು ರಾಜಕಾರಣಿಗಳು ತಮ್ಮಿಚ್ಛೆಯಂತೆ ಬದಲಾಯಿಸಲು ಸಾಧ್ಯವಾಗದಂತೆ ಕಟ್ಟುನಿಟ್ಟಾದ ಕಾನೂನನ್ನು ರೂಪಿಸಬೇಕಾಗಿದೆ. ಅಂತಹ ಕಾನೂನು ರೂಪುಗೊಂಡು ಜಾರಿಯಾಗುವವರೆಗೂ ಎಲ್ಲ ಸರ್ಕಾರಿ ಸ್ಥಾನಮಾನಗಳಿಂದ ತಾವು ದೂರವಿರುವ ನಿರ್ಧಾರವನ್ನು ಎಲ್ಲ ಸಾಹಿತಿಗಳೂ ಒಮ್ಮತದಿಂದ ಕೈಗೊಂಡಲ್ಲಿ, ಅದು ನಿಜವಾದ ತಾತ್ವಿಕ ಬದ್ಧತೆಯಾಗುತ್ತದೆ.