ಕಾರವಾರ ತಾಲ್ಲೂಕಿನ ಮಚ್ಚಳ್ಳಿಗೆ ರಸ್ತೆ ಸಂಪರ್ಕ ಇಲ್ಲದ್ದರಿಂದ ಮಹಿಳೆಯೊಬ್ಬರನ್ನು ಚಿಕಿತ್ಸೆಗಾಗಿ ಏಳು ಕಿಲೊಮೀಟರ್ ದೂರ ನಾಲ್ಕು ಮಂದಿ ಹೊತ್ತು ಸಾಗಿಸಿದ ಚಿತ್ರ (ಪ್ರ.ವಾ., ಜೂನ್ 14) ಮನಕಲಕುವಂತಿದೆ. ಉತ್ತರ ಕನ್ನಡ ಜಿಲ್ಲೆ ನೈಸರ್ಗಿಕವಾಗಿ ಸಂಪದ್ಭರಿತವಾಗಿದ್ದರೂ ಜನರ ಜೀವನ ಮಾತ್ರ ಸುಂದರವಾಗಿಲ್ಲ. ಹೊಲ, ಗದ್ದೆ, ತೋಟ ಇರುವ ಸ್ಥಳದಲ್ಲಿಯೇ ಮನೆ ಕಟ್ಟಿ ವಾಸಿಸುವ ಜನರು ಸದಾ ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಜೋಲಿ, ಸಂಕ, ಹಳ್ಳ, ಹೊಳೆ, ಗುಡ್ಡ, ಕೊಂಪೆ, ಕಾಲುದಾರಿ ಜನರಿಗೆ ಚಿರಪರಿಚಿತ ಪದಗಳು. ಮಳೆಗಾಲದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಸರ್ವೇ ಸಾಮಾನ್ಯ.