ಸಿನಿಮಾ ನಟರು ರೈತರ ಸಮಸ್ಯೆಗಳನ್ನು ಬಗೆಹರಿಸಲು ಹೋರಾಡಬೇಕೆಂಬ ಅಪೇಕ್ಷೆಗೆ ನಟ ಶಿವರಾಜ್ಕುಮಾರ್ ಅವರ ಪ್ರಬುದ್ಧ ಪ್ರತಿಕ್ರಿಯೆ (ಪ್ರ.ವಾ., ಫೆ. 11) ಮೆಚ್ಚುವಂಥದ್ದು. ಪ್ರತಿಯೊಂದು ಕ್ಷೇತ್ರದಲ್ಲೂ ಸಮಸ್ಯೆಗಳು ಇರುವುದು ಸಹಜ. ಅಂಥ ಸಂದರ್ಭದಲ್ಲಿ ಸರ್ಕಾರವು ಆಯಾ ಕ್ಷೇತ್ರದ ಪರಿಣತರ ಜೊತೆಗೆ ಸಮನ್ವಯದಿಂದ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಸೂಕ್ತವಾದ ಮಾರ್ಗ. ಒಂದು ವೇಳೆ ರೈತರೊಬ್ಬರು ಸಿನಿಮಾ ನಟರಾಗಿದ್ದರೆ ಪ್ರತಿಕ್ರಿಯೆಗೆ ಅಡ್ಡಿಯಿಲ್ಲ. ಆದರೆ ಬಹಳಷ್ಟು ಬಾರಿ ಸಿನಿಮಾ ಹೊರತಾದ ಸಮಸ್ಯೆಗಳ ಪರಿಹಾರಕ್ಕೆ ಸಿನಿಮಾ ನಟರು ಹೋರಾಟಕ್ಕೆ ಇಳಿಯಬೇಕು ಅಥವಾ ಪ್ರತಿಕ್ರಿಯೆ ನೀಡಬೇಕು ಎಂಬ ಭಾವನಾತ್ಮಕ ಅಪೇಕ್ಷೆ ಒಪ್ಪುವಂಥದ್ದಲ್ಲ.