ಕೋವಿಡ್–19 ಬಂದ ಆರಂಭದಲ್ಲಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದನ್ನು ಸರ್ಕಾರ ಕಡ್ಡಾಯಗೊಳಿಸಿತು. ಆದರೆ ಇದೀಗ ಕೋವಿಡ್ ಮಾರ್ಗಸೂಚಿಗಳು ಸಡಿಲವಾಗಿರುವುದರಿಂದ ಈ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ. ವೈಕುಂಠ ಏಕಾದಶಿಯಂದು ದೇವಸ್ಥಾನಗಳಲ್ಲಿ ಜನ ಕಿಕ್ಕಿರಿದಿದ್ದರು. ಯಾತ್ರಾ ಸ್ಥಳಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಂತಹ ದೇವಸ್ಥಾನಗಳಲ್ಲಿಯೂ ದಟ್ಟವಾದ ಸರದಿ ಸಾಲಲ್ಲಿ ತಳ್ಳಾಡಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಶಿವಗಂಗೆಯಲ್ಲಿ ಜನ ಅಂತರ ಮರೆತದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು.