ನಮ್ಮ ಪ್ರಮುಖ ನಗರಗಳನ್ನು ಸ್ವಚ್ಛವಾಗಿಡಲು ಪ್ರತಿನಿತ್ಯ ಸಾವಿರಾರು ಪೌರಕಾರ್ಮಿಕರು ಶ್ರಮ ವಹಿಸುತ್ತಾರೆ, ಇವರಲ್ಲಿ ಹೆಚ್ಚಿನವರು ಗುತ್ತಿಗೆ ಆಧಾರದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ತಮ್ಮ ಸೇವೆಯನ್ನು ಕಾಯಂ ಮಾಡುವಂತೆ ಕಳೆದ ವರ್ಷ ಅವರೆಲ್ಲ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದ್ದರು. ಅವರ ಅಹವಾಲನ್ನು ಆಲಿಸಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು, ಸೇವೆಯನ್ನು ಕಾಯಂ ಮಾಡುವ ಬದಲು, ಮಾಸಿಕ ₹ 10,000 ಇದ್ದ ಅವರ ಸಂಬಳವನ್ನು ₹ 17,000ಕ್ಕೆ ಹೆಚ್ಚಿಸಿತು. ಅದಲ್ಲದೆ ‘ಇನ್ಸ್ಪೆಕ್ಟರ್’ ಎಂಬ ಹುದ್ದೆಯೊಂದನ್ನು ಸೃಷ್ಟಿಸಿ ಸರ್ಕಾರಿ ಅಧಿಕಾರಿಯೊಬ್ಬರನ್ನು ಪೌರಕಾರ್ಮಿಕರ ಮೇಲ್ವಿಚಾರಣೆಗೆ ನೇಮಿಸಿತು.