ದೇಶದಲ್ಲಿ ಒಂದೆಡೆ ಸುಳ್ಳು ಸುದ್ದಿಗಳಿಂದ ಅಮಾಯಕರ ಮೇಲಿನ ಹಲ್ಲೆಗಳು ಹೆಚ್ಚುತ್ತಿವೆ. ಹಲವಾರು ಹಲ್ಲೆಗಳು ಸಾವಿನಲ್ಲಿ ಅಂತ್ಯವಾಗಿವೆ. ಮತ್ತೊಂದೆಡೆ, ದಿಢೀರ್ ನ್ಯಾಯವೇ ಸರಿಯಾದ ಮಾರ್ಗ ಎಂಬ ಸಂದೇಶವನ್ನು ಹೈದರಾಬಾದಿನ ಎನ್ಕೌಂಟರ್ ರವಾನಿಸಿದೆ. ದಿಢೀರ್ ನ್ಯಾಯದಾನಕ್ಕೂ ಶೀಘ್ರ ನ್ಯಾಯದಾನಕ್ಕೂ ಇರುವ ವ್ಯತ್ಯಾಸವನ್ನು ಸಾರ್ವಜನಿಕರು ಅರಿತುಕೊಳ್ಳಬೇಕು. ದಿಢೀರ್ ನ್ಯಾಯಕ್ಕೆಅನುಮಾನವೇ ಬಲವಾದ ಆಧಾರ. ವಿಚಾರಣಾ ಪ್ರಕ್ರಿಯೆಗೆ ಅದು ಒಳಪಟ್ಟಿರುವುದಿಲ್ಲ. ಆದರೆ, ಶೀಘ್ರ ನ್ಯಾಯದಾನವು ಆಪಾದಿತನು ಅಪರಾಧಿ ಎಂದು ಅನುಮಾನಾತೀತವಾಗಿ ಖಚಿತವಾದ ನಂತರ ನೀಡುವುದಾಗಿರುತ್ತದೆ.
ನಮ್ಮ ನ್ಯಾಯವ್ಯವಸ್ಥೆಯು ಶೀಘ್ರ ನ್ಯಾಯದಾನ ನೀಡುವಲ್ಲಿ ವಿಫಲವಾಗಿದೆ. ಇದಕ್ಕೆ ಅನೇಕ ಕಾರಣಗಳಿವೆ. ಈ ನ್ಯೂನತೆಗಳನ್ನು ಸರಿಪಡಿಸಲು ನಾಗರಿಕರು ಆಗ್ರಹಿಸಬೇಕು. ಆಗಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ. ಇಲ್ಲವಾದರೆ ಅರಾಜಕತೆ ಆವರಿಸಿಕೊಳ್ಳುತ್ತದೆ.