ಕರ್ನಾಟಕ ಯುವನೀತಿಯಲ್ಲಿ ಗ್ರಾಮ ಪಂಚಾಯಿತಿಗೊಂದು ಯುವಜನ ಅಭಿವೃದ್ಧಿ ಅಧಿಕಾರಿಯನ್ನು ನೇಮಿಸುವ ಪ್ರಸ್ತಾಪವಿದ್ದರೂ ಸರ್ಕಾರ ಇದನ್ನು ಅನುಮೋದಿಸಿಲ್ಲ. ಯುವಜನ ಸಬಲೀಕರಣದ ಹಲವು ಪ್ರಸ್ತಾವಗಳನ್ನು ಕೈಬಿಡಲಾಗಿದೆ. ಶಿಕ್ಷಣ ಸಂಬಂಧಿತ ಮೂಲ ಸೌಕರ್ಯಗಳು, ಯುವಜನರ ಆರೋಗ್ಯ ಸುಧಾರಣೆ, ಯುವಜನರಿಗೆ ಜೀವನೋಪಾಯದ ದಾರಿಗಳನ್ನು ಸೃಷ್ಟಿಸಿ ತರಬೇತಿ ನೀಡುವುದು ಮತ್ತು ತರಬೇತಿ ನೀಡುವ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವುದು ಇವೆಲ್ಲದರಲ್ಲೂ ಸ್ಥಳೀಯ ಸಂಸ್ಥೆಗಳು ಸಕ್ರಿಯ ಪಾತ್ರ ನಿರ್ವಹಿಸಲು ಸಾಧ್ಯ. ಹೆಸರಿಗಷ್ಟೇ ಔಪಚಾರಿಕ ಸಭೆಗಳನ್ನು ನಡೆಸಿ ಭಾಷಣ ಮಾಡುವುದಕ್ಕಿಂತಲೂ ಯುವಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಅವರ ಸಮಸ್ಯೆ, ಸವಾಲುಗಳು ಮತ್ತು ಸಾಧ್ಯತೆಗಳನ್ನು ಅವರೇ ಮುಕ್ತವಾಗಿ ಹಂಚಿಕೊಳ್ಳುವಂತೆ, ಪಂಚಾಯಿತಿ ಜೊತೆಗೂಡಿ ಕೆಲಸ ಮಾಡುವಂತೆ ಈ ಸಭೆಗಳನ್ನು ವಿನ್ಯಾಸಗೊಳಿಸಬೇಕಾಗಿದೆ.