ವಾಚಕರ ವಾಣಿ: ಹೀಗಿರಲಿ ಯುವಜನ ಗ್ರಾಮಸಭೆ...
ಇದೇ 12ರಿಂದ 19ರ ನಡುವೆ ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ಯುವಜನ ಗ್ರಾಮಸಭೆ ನಡೆಸಲು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸ್ವಾಗತಾರ್ಹ. ಆದರೆ ಕೊನೆಯ ಗಳಿಗೆಯಲ್ಲಿ ಸುತ್ತೋಲೆ ಕಳುಹಿಸಿದರೆ ಅಗತ್ಯವಾದ ಸಿದ್ಧತೆ ನಡೆಸಲು ತೊಡಕಾಗುವುದು ಸಹಜ. ಯುವಜನರ ಭಾಗವಹಿಸುವಿಕೆಯ ಹಕ್ಕು ಮತ್ತು ಸಬಲೀಕರಣದ ನೆಲೆಯಿಂದ ಯುವಜನ ಗ್ರಾಮಸಭೆಗಳು ಮುಖ್ಯವಾದವು. ಅಲ್ಲದೆ ಗ್ರಾಮದ ಅಭಿವೃದ್ಧಿಯಲ್ಲಿ ಯುವಜನರನ್ನು ಸಕ್ರಿಯಗೊಳಿಸುವ ಉದ್ದೇಶದಿಂದಲೂ ಈ ಸಭೆಗಳು ನಡೆಯುವಂತೆ ನೋಡಿಕೊಳ್ಳಬೇಕಾಗಿದೆ.
ಕರ್ನಾಟಕ ಯುವನೀತಿಯಲ್ಲಿ ಗ್ರಾಮ ಪಂಚಾಯಿತಿಗೊಂದು ಯುವಜನ ಅಭಿವೃದ್ಧಿ ಅಧಿಕಾರಿಯನ್ನು ನೇಮಿಸುವ ಪ್ರಸ್ತಾಪವಿದ್ದರೂ ಸರ್ಕಾರ ಇದನ್ನು ಅನುಮೋದಿಸಿಲ್ಲ. ಯುವಜನ ಸಬಲೀಕರಣದ ಹಲವು ಪ್ರಸ್ತಾವಗಳನ್ನು ಕೈಬಿಡಲಾಗಿದೆ. ಶಿಕ್ಷಣ ಸಂಬಂಧಿತ ಮೂಲ ಸೌಕರ್ಯಗಳು, ಯುವಜನರ ಆರೋಗ್ಯ ಸುಧಾರಣೆ, ಯುವಜನರಿಗೆ ಜೀವನೋಪಾಯದ ದಾರಿಗಳನ್ನು ಸೃಷ್ಟಿಸಿ ತರಬೇತಿ ನೀಡುವುದು ಮತ್ತು ತರಬೇತಿ ನೀಡುವ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವುದು ಇವೆಲ್ಲದರಲ್ಲೂ ಸ್ಥಳೀಯ ಸಂಸ್ಥೆಗಳು ಸಕ್ರಿಯ ಪಾತ್ರ ನಿರ್ವಹಿಸಲು ಸಾಧ್ಯ. ಹೆಸರಿಗಷ್ಟೇ ಔಪಚಾರಿಕ ಸಭೆಗಳನ್ನು ನಡೆಸಿ ಭಾಷಣ ಮಾಡುವುದಕ್ಕಿಂತಲೂ ಯುವಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಅವರ ಸಮಸ್ಯೆ, ಸವಾಲುಗಳು ಮತ್ತು ಸಾಧ್ಯತೆಗಳನ್ನು ಅವರೇ ಮುಕ್ತವಾಗಿ ಹಂಚಿಕೊಳ್ಳುವಂತೆ, ಪಂಚಾಯಿತಿ ಜೊತೆಗೂಡಿ ಕೆಲಸ ಮಾಡುವಂತೆ ಈ ಸಭೆಗಳನ್ನು ವಿನ್ಯಾಸಗೊಳಿಸಬೇಕಾಗಿದೆ.
-ಜನಾರ್ದನ ಕೆಸರಗದ್ದೆ, ಬಂಟ್ವಾಳ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.