ಜಗಳೂರು ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ (ಬಿಇಒ) ಕಚೇರಿಗೆ ಕೆಲಸದ ಮೇಲೆ ಇತ್ತೀಚೆಗೆ ಭೇಟಿ ನೀಡಿದ್ದೆ. ಅಲ್ಲಿನ ಒಂದು ಸಂದಿಯಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ಬಯಲು ಶೌಚಕ್ಕೆ ಹೋಗಿ ಬರುತ್ತಿದ್ದುದನ್ನು ನೋಡಿ ಅಚ್ಚರಿಯಾಯಿತು. ಒಬ್ಬರನ್ನು ‘ಏನ್ ಸರ್, ಮಕ್ಕಳಿಗೆ ಪಾಠ ಮಾಡುವ ನೀವು ಈ ರೀತಿ ಬಯಲು ಶೌಚ ಮಾಡುತ್ತಿದ್ದೀರಲ್ಲ’ ಎಂದು ಕೇಳಿದೆ. ಅದಕ್ಕೆ, ‘ಬೇರೆಯವರೆಲ್ಲ ನಿನಗೆ ಕಾಣಿಸುವುದಿಲ್ಲವೇ? ನನಗೇಕೆ ಕೇಳುತ್ತಿದ್ದೀಯಾ?’ ಎಂಬ ಉತ್ತರ ಅವರಿಂದ ಬಂತು. ಮರುಮಾತನಾಡದೆ ವಾಪಸಾದೆ. ಇಡೀ ಒಂದು ತಾಲ್ಲೂಕಿನ ಶಾಲೆಗಳಿಗೆಲ್ಲ ಬಿಇಒ ಕಚೇರಿಯೇ ಮಾದರಿ. ಆದರೆ ನಮ್ಮ ಜಗಳೂರಿನ ಅವ್ಯವಸ್ಥೆಯನ್ನು ನೋಡಿ ಹೇಸಿಗೆಯಾಯಿತು. ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಲಿ.