ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರ ದುರಂತ ಸಾವಿಗೆ ಸ್ವತಃ ಅವರೇ ಕಾರಣ ಎಂಬಂತೆ ಕೆಲವರು ಮಾತನಾಡುತ್ತಿದ್ದಾರೆ. ಯಾವ ಬಲಾಢ್ಯ ರಾಜಕಾರಣಿಯೂ 50 ಸಾವಿರ ಜನರಿಗೆ ಉದ್ಯೋಗ ಕೊಡುವ ಉದ್ದಿಮೆ ಸ್ಥಾಪಿಸಿಲ್ಲ. ಬದಲಿಗೆ, ಜನರನ್ನು ಶೋಷಿಸಿ ತಾವು ಪ್ರಬಲರಾಗಿದ್ದಾರೆ. ಅಧಿಕಾರಸ್ಥ ರಾಜಕಾರಣಿಗಳ ಸೂಚನೆಯಂತೆ ಐ.ಟಿ ಅಧಿಕಾರಿಗಳು ಕೆಲವರ ಮೇಲೆ ಅಕ್ಷರಶಃ ದಾಳಿ ಮಾಡಿ, ಬೆದರಿಸಿಯಾದರೂ ಬಾಕಿ ಹೆಸರಲ್ಲಿ ಬಡ್ಡಿ ಸಹಿತ ತೆರಿಗೆ ಕಿತ್ತುಕೊಳ್ಳುತ್ತಾರೆ. ತೆರಿಗೆ ವಂಚಿಸಲಾಗಿದೆಯೋ ಅಥವಾ ಆ ಸಂಸ್ಥೆ ನಷ್ಟದಲ್ಲಿದೆಯೋ ಎಂಬುದನ್ನೆಲ್ಲ ಆ ಹೊತ್ತಿನಲ್ಲಿ ಅವರು ನೋಡಲಾರರು. ಸುಂಕದವನ ಮುಂದೆ ಸುಖ- ದುಃಖವೇ ಎಂಬ ಗಾದೆಯೇ ಇದೆ.