ಅನೇಕ ಮಕ್ಕಳಿಗೆ ಗಣಿತ ಎನ್ನುವುದು ಶಿಕ್ಷಣದ ಬೇರೆ ಬೇರೆ ಹಂತಗಳಲ್ಲಿ ಕಬ್ಬಿಣದ ಕಡಲೆಯಾಗಿಯೇ ಪರಿಣಮಿಸಿದೆ. ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಗಣಿತ ಕಲಿಕೆಯು ಹಿನ್ನಡೆ ಅನುಭವಿಸುತ್ತಲೇ ಇದೆ. ಅದಕ್ಕೆ ದಕ್ಷ ಅಧ್ಯಾಪಕರ ಕೊರತೆಯೂ ಒಂದು ಕಾರಣ ಎಂದು ಹೇಳಬಹುದೇನೊ. ಇಂದಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರವೇಶ ಪಡೆಯಬೇಕಾದರೆ, ಗಣಿತದಲ್ಲಿ ಪ್ರಾವೀಣ್ಯ ಅತ್ಯವಶ್ಯಕ. ಹಾಗೆಂದ ಮಾತ್ರಕ್ಕೆ ಎಲ್ಲರೂ ಎಂಜಿನಿಯರ್ಗಳು ಆಗಬೇಕೆಂದೇನಿಲ್ಲ. ಹಾಗಾಗಿ ಇಂಗ್ಲೆಂಡ್ನಲ್ಲಿ ಈಗ ಮಾಡುತ್ತಿರುವಂತೆ, ಗಣಿತ ಕಲಿಕೆಗೆ ಹೆಚ್ಚಿನ ಪ್ರಾಮುಖ್ಯ ನೀಡಿದ್ದೇ ಆದರೆ, ವಿದ್ಯಾರ್ಥಿಗಳು ಬೇರೆ ಬೇರೆ ಹಂತಗಳಲ್ಲಿ ಮುನ್ನಡೆಯಬಹುದು.