ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚೆಗೆ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ತೊಂದರೆ ಹೇಳಲು ಹೋದ ಜನರ ಮೇಲೆ ಸಿಟ್ಟಾಗಿ, ‘ವೋಟು ಮೋದಿಗೆ ಹಾಕುತ್ತೀರಿ, ಸಮಸ್ಯೆ ಬಗೆಹರಿಸಲು ನಾವು ಬೇಕೇ’ ಎಂದು ಕೇಳಿದ್ದಾರೆ.
ಅದೇ ಧಾಟಿಯಲ್ಲಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಸಹ ‘ಪಂಚಾಯಿತಿಗಳಿಗೆ ಅನುದಾನ, ಬಡವರಿಗಾಗಿ ಅನ್ನಭಾಗ್ಯ ತಂದಿದ್ದು, ವಿದ್ಯಾರ್ಥಿಗಳಿಗೆ ಶೂ ಭಾಗ್ಯ ಕೊಟ್ಟಿದ್ದು ನಾವಾದರೂ ಜನ ಬಿಜೆಪಿಗೆ ವೋಟ್ ಹಾಕಿದರು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಂತಹ ಚಾಳಿಯು ಇವರಲ್ಲಷ್ಟೇ ಅಲ್ಲ; ಪಂಚಾಯಿತಿಗಳು, ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲೂ ಇದೆ. ಶಾಸಕರ ಬಳಿ ಜನ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾಗಲೂ ಎಷ್ಟೋ ಬಾರಿ ಇಂತಹುದೇ ಉತ್ತರಗಳು ದೊರೆತಿವೆ.
ಪ್ರಜಾಪ್ರಭುತ್ವದಲ್ಲಿ ವೋಟಿನ ಹಕ್ಕನ್ನು ಪ್ರಶ್ನಿಸುವುದು ಎಷ್ಟು ಸರಿ? ಮತದಾರರೇನು ಇವರ ಗುಲಾಮರೇ? ವೋಟು ಹಾಕುವುದು ಅವರವರಿಗೆ ಬಿಟ್ಟ ವಿಚಾರ. ಜನಪ್ರತಿನಿಧಿಗಳು ಇಂತಹ ಲಘು ರಾಜಕೀಯ ಬಿಟ್ಟು ಜನರ ಏಳಿಗೆಯತ್ತ ಗಮನಹರಿಸಲಿ.