ರಾಜ್ಯದ ರಾಜಧಾನಿಯಲ್ಲಿ ತಡವಾಗಿಯಾದರೂ ಇತ್ತೀಚಿನ ದಿನಗಳಲ್ಲಿ ಆಟೊ ಚಾಲಕರ ಮೇಲೆ ಪೊಲೀಸರು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುತ್ತಿರುವುದು ಸಂತೋಷದ ವಿಷಯ. ಕೆಲವು ಆಟೊ ಚಾಲಕರ ವರ್ತನೆಯಿಂದ ಜನ ತಮ್ಮ ದೈನಂದಿನ ಕಾರ್ಯ ನಿರ್ವಹಣೆಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಯಾಣಿಕರು ತಾವು ಹೋಗಬೇಕಾದ ಸ್ಥಳಕ್ಕೆ ಬರಲು ಚಾಲಕ ಅನುಮತಿ ಕೊಟ್ಟರೆ ಮಾತ್ರ ಆಟೊ ಹತ್ತಿ ಪ್ರಯಾಣಿಸುವ ದಯನೀಯ ಪರಿಸ್ಥಿತಿ ಇದೆ.
ಸಾರ್ವಜನಿಕರ ಸೇವೆಗಾಗಿ ಇರುವ ಆಟೊಗಳು ಸಾರ್ವಜನಿಕ ರಸ್ತೆಗಳಲ್ಲಿ ಓಡಾಡುತ್ತಿವೆ ಎನ್ನುವುದನ್ನು ಚಾಲಕರು ಮರೆತಂತಿದೆ. ಹಲವೆಡೆ ಸಂಚಾರ ನಿಯಮಗಳನ್ನು ಪಾಲಿಸದಿರುವುದು, ನಿಲುಗಡೆ ತಾಣಗಳಲ್ಲಿ ವಾಹನ ನಿಲ್ಲಿಸದೆ ಬೇರೆ ವಾಹನಗಳಿಗೆ ತೊಂದರೆಯಾಗುವಂತೆ ನಿಲ್ಲಿಸುವುದು, ಹೆಚ್ಚಿನ ಬಾಡಿಗೆ ಕೇಳುವುದು, ಸಾರ್ವಜನಿಕರ ಮೇಲೆ ಹಲ್ಲೆ, ಕೆಟ್ಟ ಮಾತುಗಳ ಪ್ರಯೋಗ, ರೈಲು ನಿಲ್ದಾಣದ ಒಳಗೆ ಬರದೆ ಮುಖ್ಯ ರಸ್ತೆಯಲ್ಲೇ ಇಳಿಸುವುದು, ವಾಹನ ದಟ್ಟಣೆ ಇರುವಲ್ಲಿಯೇ ಪ್ರಯಾಣಿಕರನ್ನು ಹುಡುಕಲು ನಿಧಾನವಾಗಿ ಚಲಿಸುತ್ತಾ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟು ಮಾಡುವುದು ಸಾಮಾನ್ಯ ಸಂಗತಿಗಳಾಗಿವೆ. ಪೊಲೀಸರಿಗೆ ಬೆಂಗಳೂರಿನ ಸಾರ್ವಜನಿಕರ ಬೆಂಬಲ ಇದೆ. ಅವರು ಯಾವ ಒತ್ತಡಕ್ಕೂ ಜಗ್ಗದೆ ಇದೇ ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ.