ಅಧಿಕಾರ ವಿಕೇಂದ್ರೀಕರಣದ ಮೊದಲ ಹಂತ ಮತ್ತು ಪ್ರಜಾಪ್ರಭುತ್ವದ ಆಧಾರ ಸ್ತಂಭವೆಂದು ಪರಿಗಣಿಸಲಾದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪ್ರಾತಿನಿಧ್ಯ ವಂಚಿತ ಜಾತಿ, ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರೆತಾಗ ಮಾತ್ರ ಪಂಚಾಯತ್ ರಾಜ್ ವ್ಯವಸ್ಥೆಯ ಉದ್ದೇಶ ಸಫಲವಾಗುತ್ತದೆ.
ಆದರೆ, ರಾಜ್ಯದಲ್ಲಿ ಈಗ ನಡೆಯಲಿರುವ ಎರಡು ಹಂತದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಹಿಂದುಳಿದ ಜಾತಿಗಳಿಗೆ ಸರಿಯಾದ ಪ್ರಾತಿನಿಧ್ಯ ನೀಡದಿರುವುದು ಸಂವಿಧಾನದ ಮೂಲ ಆಶಯವನ್ನೇ ಬುಡಮೇಲು ಮಾಡಿದಂತಾಗಿದೆ. 5,844 ಗ್ರಾಮ ಪಂಚಾಯಿತಿಗಳಿಂದ ಒಟ್ಟು 99,981 ಪ್ರತಿನಿಧಿಗಳು ಚುನಾಯಿತರಾಗಲಿದ್ದಾರೆ. ಜನಸಂಖ್ಯೆಯಲ್ಲಿ ಪ್ರತಿಶತ ಅಂದಾಜು 35ರಷ್ಟಿರುವ ಒ.ಬಿ.ಸಿ.ಗಳಿಗೆ ಕೇವಲ 18,236 ಸ್ಥಾನ ನಿಗದಿಪಡಿಸಿರುವುದು ಈ ವರ್ಗಗಳಿಗೆ ಮಾಡಿದ ರಾಜಕೀಯ ದ್ರೋಹ ಎಂದರೆ ತಪ್ಪಾಗಲಾರದು. ವಿಶೇಷವಾಗಿ ಅತಿ ಹಿಂದುಳಿದ ಉಪ್ಪಾರ, ಗೊಲ್ಲ, ಗಂಗಾಮತ, ಮಡಿವಾಳ, ಸವಿತಾ, ವಿಶ್ವಕರ್ಮ, ನೇಕಾರ, ಗಾಣಿಗ, ಬಲಿಜ ಹಾಗೂ ಭಾಷಾಅಲ್ಪಸಂಖ್ಯಾತರು ಮತ್ತು ಪ್ರವರ್ಗ-1 ಗುಂಪಿನಲ್ಲಿರುವ ಬುಡಕಟ್ಟು ಮತ್ತು ಅಲೆಮಾರು ಸಮುದಾಯಗಳ ಅಭ್ಯರ್ಥಿಗಳು ಅವೈಜ್ಞಾನಿಕ ರಾಜಕೀಯ ಮೀಸಲಾತಿಯಿಂದ ನ್ಯಾಯೋಚಿತ ಪ್ರಾತಿನಿಧ್ಯ ಪಡೆಯವುದು ಕಷ್ಟಕರ.
ಹಿಂದುಳಿದ ಅ ಮತ್ತು ಬಿ ಗುಂಪಿನಲ್ಲಿ ರಾಜಕೀಯದಲ್ಲಿ ತಕ್ಕಮಟ್ಟಿಗೆ ಸುಸ್ಥಿತಿಯಲ್ಲಿರುವ ಒಂದೆರಡು ಹಿಂದುಳಿದ ಜಾತಿಗಳು ಮತ್ತು ಮೇಲ್ವರ್ಗಗಳಿಗೆ ಮಾತ್ರ ಸಿಂಹಪಾಲು ದೊರೆಯಲಿದ್ದು, ಜಾತಿ ಬಲ ಇಲ್ಲದ ಅಸಂಘಟಿತ ಹಾಗೂ ದಮನಿತ ಜಾತಿಗಳನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗಿದೆ. ಲೋಕಸಭೆ, ವಿಧಾನಸಭೆಯಲ್ಲೂ ಇವರ ಪ್ರಾತಿನಿಧ್ಯ ಅಷ್ಟಕಷ್ಟೆ. ಸ್ಥಳೀಯ ಸಂಸ್ಥೆ ಪ್ರಾತಿನಿಧ್ಯದಲ್ಲೂ ಇವರಿಗೆ ನ್ಯಾಯ ದೊರೆಯದಿದ್ದರೆ ಹೇಗೆ? ಮೀಸಲಾತಿ ಯಾವ ಪುರುಷಾರ್ಥಕ್ಕಾಗಿ?