ವಿದ್ಯಾಪೀಠ ವಾರ್ಡ್ ಸಂಖ್ಯೆ 154ರಲ್ಲಿ ನಗರಪಾಲಿಕೆಯ ತೋಟಗಾರಿಕಾ ಇಲಾಖೆಯ ಒಂದು ಸುಂದರ ಉದ್ಯಾನವನವಿದೆ. ಅದು ಉತ್ತಮ ನಿರ್ವಹಣೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿದಿನ ಅಲ್ಲಿಗೆ ಬರುವ ನೂರಾರು ನಾಗರಿಕರ ವಿಹಾರದ ಸ್ಥಳವಾಗಿ ಅವರಿಗೆಲ್ಲಾ ಮಹದಾನಂದ ನೀಡುತ್ತಿದೆ.
ಇದರ ಜೊತೆಗೆ ಈ ಉದ್ಯಾನಕ್ಕೆ ಹೊಂದಿಕೊಂಡಂತೆಯೇ ಮಕ್ಕಳ ಆಟಗಳ ಉಪಕರಣಗಳೊಂದಿಗೆ ಒಂದು ಸ್ಥಳ ನಿಗದಿಯಾಗಿದೆ. ಮತ್ತೊಂದು ಸ್ಥಳದಲ್ಲಿ ಹಿರಿಯರ ಆರೋಗ್ಯ ಸುಧಾರಣೆಗೆ ಅನೇಕ ವ್ಯಾಯಾಮಗಳ ಅನುಕೂಲತೆಗಳನ್ನೂ ಮಾಡಲಾಗಿದೆ. ಈ ವಿಶೇಷ ಅನುಕೂಲತೆಗಳನ್ನು ಕಲ್ಪಿಸಿರುವ ಇಲಾಖೆಗೆ ವಿಶೇಷ ನಮನಗಳು. ಹಾಗೆಯೇ ಇಲ್ಲಿರುವ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಸಹ ತುಂಬಾ ಚೆನ್ನಾಗಿ ಸಹಜವಾಗಿದ್ದು ವನದ ಶೋಭೆಯನ್ನು ಹೆಚ್ಚಿಸಿದೆ.
ಆದರೆ ಈ ಸುಂದರ ಉದ್ಯಾನದ ಮುಖ್ಯದ್ವಾರದ ಬಳಿಯೇ ವಿಪರೀತ ಕಸವನ್ನು ಸುರಿಯಲಾಗಿದೆ. ಇದನ್ನು ತೆರವುಗೊಳಿಸಬೇಕು. ಹಾಗೆಯೇ ಮಕ್ಕಳು ಆಟವಾಡುವ ಸ್ಥಳದಲ್ಲಿ ತುಂಬಾ ದೂಳು ಏಳುತ್ತದೆ. ಅದನ್ನು ಸರಿಪಡಿಸಬೇಕು. ಪ್ರವೇಶ ದ್ವಾರದ ಬಳಿ ಇರುವ ದೊಡ್ಡ ಸೂಚನಾಫಲಕ ಹಳೆಯದಾಗಿದ್ದು, ಅದನ್ನು ನವೀಕರಿಸಬೇಕು.
ವ್ಯಾಯಾಮದ ನಂತರ ಬೇಕಾಗಬಹುದಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಉದ್ಯಾನದ ಉತ್ತಮ ನಿರ್ವಹಣೆಯ ದೃಷ್ಟಿಯಿಂದ ಅದನ್ನು ನಿರ್ದಿಷ್ಟ ವೇಳೆಯಂತೆ ತೆರೆದು, ಮಿಕ್ಕ ಸಮಯದಲ್ಲಿ ಮುಚ್ಚಬೇಕು.