ಏ. 3 ರಂದು ನಡೆದ ಎಸ್ಎಸ್ಎಲ್ಸಿ ವಿಜ್ಞಾನ ವಿಷಯದ ಪರೀಕ್ಷೆ ಮಕ್ಕಳಿಗೋ ಶಿಕ್ಷಕರಿಗೋ ಎಂಬುದು ತಿಳಿಯುತ್ತಿಲ್ಲ. ಪ್ರಶ್ನೆ ಪತ್ರಿಕೆ ರೂಪಿಸಿದವರಿಗೆ ಇನ್ನೆರಡು ವರ್ಷಗಳಲ್ಲಿ ಈಗಿನ ಸಿಲಬಸ್ ಬದಲಾಗುತ್ತಿರುವುದು ಗೊತ್ತಿಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಪ್ರಶ್ನೆ ಪತ್ರಿಕೆ ರೂಪಿಸುವವರು ತಮ್ಮ ಅಖಂಡ ಬುದ್ಧಿಮತ್ತೆ ಪ್ರದರ್ಶಿಸಲು ಮಕ್ಕಳ ಮೇಲೆ ಪ್ರಯೋಗ ನಡೆಸಿದ್ದಾರೆ.
ಅತಿಯಾದ ಬುದ್ಧಿವಂತಿಕೆ ಪ್ರದರ್ಶಿಸಿ ಕ್ಲಿಷ್ಟ ಪ್ರಶ್ನೆ ಪತ್ರಿಕೆ ಮಾಡುವುದು ಯಾವ ಪುರುಷಾರ್ಥಕ್ಕೆ? ಪ್ರೌಢಹಂತದ ಮಕ್ಕಳನ್ನು ಈ ವಿಷಯದಲ್ಲಿ ಇಷ್ಟೊಂದು ಅತಿಯಾದ ಜಾಣತನದ ಪರೀಕ್ಷೆಗೆ ಒಡ್ಡುವುದು ಸಮಂಜಸವಲ್ಲ. ಈ ವಿಷಯದ ಬಗ್ಗೆ ಆಗಿರುವ ಕ್ಲಿಷ್ಟತೆಯನ್ನು ಪರಿಗಣಿಸಿ ಗ್ರೇಸ್ ಅಂಕ ನೀಡದಿದ್ದಲ್ಲಿ ಜೂನ್ ತಿಂಗಳಲ್ಲಿ ನಡೆಯುವ ಮರುಪರೀಕ್ಷೆಗೆ ಇನ್ನೂ ಆರು ಲಕ್ಷ ವಿದ್ಯಾರ್ಥಿಗಳು ಸಿದ್ಧರಾಗಬೇಕಾಗುತ್ತದೆ.
ನಮ್ಮ ಪರೀಕ್ಷೆಗಳು ಪ್ರತಿಷ್ಠಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಕಡೆಗೆ ಅಲ್ಲ, ಹಳ್ಳಿಗಾಡಿನ ಅನುದಾನಿತ, ಅನುದಾನರಹಿತ, ಸರ್ಕಾರಿ ಶಾಲೆಗಳು ಹಾಗೂ ನಗರದ ಸರ್ಕಾರಿ ಶಾಲೆಗಳು ಎಂಬುದನ್ನು ಮರೆಯಬಾರದು. ಚಿತ್ರಗಳನ್ನು ಹೊರತು ಪಡಿಸಿ ಬಹುತೇಕ ಪ್ರಶ್ನೆ ಪತ್ರಿಕೆ ಗೊಂದಲದ ಗೂಡಾಗಿದೆ. ಏತಕ್ಕಾಗಿ ಈ ಪ್ರಯೋಗ.