ರಾಜ್ಯದಲ್ಲಿ ಸರ್ಕಾರಿ ವೈದ್ಯರ ವೇತನ ಭತ್ಯೆಗಳನ್ನು ಮೂರ್ನಾಲ್ಕು ವರ್ಷಗಳಲ್ಲಿ 3–4 ಬಾರಿ ಹೆಚ್ಚಿಸಲಾಗಿದೆ. ಇದಕ್ಕೆ ಸರ್ಕಾರ ಕೊಡುವ ಕಾರಣ: ‘ವೈದ್ಯರು ಸರ್ಕಾರಿ ಕೆಲಸಕ್ಕೆ ಬರುತ್ತಿಲ್ಲ!’
ತಿಂಗಳಿಗೆ ₹ 40 ಸಾವಿರದಿಂದ 50 ಸಾವಿರ ವೇತನ ಪಡೆಯುತ್ತಿದ್ದ ವೈದ್ಯರು, ಇಂದು ₹ 1 ಲಕ್ಷದಿಂದ 1.50 ಲಕ್ಷ ವೇತನ ಪಡೆಯುತ್ತಿದ್ದಾರೆ. ಆದರೆ ಆರೋಗ್ಯ ಇಲಾಖೆಯ ಉಳಿದ ಯಾವುದೇ ಹುದ್ದೆಯ ಸಿಬ್ಬಂದಿಗೆ ವೇತನ ಏರಿಕೆ ಮಾಡಿಲ್ಲ. ಇಲ್ಲಿ ಮೂಲ ಪ್ರಶ್ನೆ ಎಂದರೆ ವೈದ್ಯರೇ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿರುವರೇ? ಇತರೆ ಸಿಬ್ಬಂದಿಯ ಪಾತ್ರ ಏನೂ ಇಲ್ಲವೇ?
ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್ಗಳು ವೈದ್ಯರಿಗೆ ಲಕ್ಷಾಂತರ ರೂಪಾಯಿ ವೇತನ ನೀಡುತ್ತವೆ. ವಾರ್ಷಿಕ ಗುತ್ತಿಗೆ, ಮಾಸಿಕ ಗುತ್ತಿಗೆ ಆಧಾರದ ಮೇಲೆ ನೀಡುವ ಈ ವೇತನ ಅಂತಿಮವಾಗಿ ರೋಗಿಗಳನ್ನು ಕೊಳ್ಳೆಹೊಡೆಯಲು ಕಾರಣವಾಗಿದೆ. ರೋಗ ಉಲ್ಬಣಿಸದಿದ್ದರೂ ಹೃದಯಕ್ಕೆ ಶಸ್ತ್ರಚಿಕಿತ್ಸೆ, ಸ್ಟಂಟ್ ಹಾಕುವುದು, ಸಣ್ಣ ಸಣ್ಣ ಕಾರಣಕ್ಕೂ ಶಸ್ತ್ರಚಿಕಿತ್ಸೆ ನಡೆಸುವುದು, ಸಾಮಾನ್ಯವಾಗಿ ಆಗಬಹುದಾದ ಹೆರಿಗೆಗೆ ಸಿಸೇರಿಯನ್ ಮಾಡುವುದು ಇಂಥವಕ್ಕೆ ಕಾರಣ
ವಾಗುವ ಅಂಶಗಳಲ್ಲಿ ಯರ್ರಾಬಿರ್ರಿ ವೇತನವೂ ಒಂದು!
ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್ಗಳ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಿ, ಎಲ್ಲಾ ಚಿಕಿತ್ಸೆಗಳಿಗೂ ಸರ್ಕಾರ ದರ ಪಟ್ಟಿಗಳನ್ನು ನಿಗದಿಪಡಿಸಿ, ಅದನ್ನು ಪಾಲಿಸುವಂತೆ ಕಟ್ಟುನಿಟ್ಟಿನ ನಿಗಾ ವ್ಯವಸ್ಥೆ ರೂಪಿಸಿದ್ದಿದ್ದರೆ ಸಾರ್ವಜನಿಕರ ಸುಲಿಗೆಯೂ ತಪ್ಪುತ್ತಿತ್ತು. ಸರ್ಕಾರಿ ಆಸ್ಪತ್ರೆಗಳ ವೈದ್ಯರ ವೇತನ ಏರಿಕೆ ಸಮಸ್ಯೆಯೂ ಬರುತ್ತಿರಲಿಲ್ಲ.
ಅಂದಹಾಗೆ ಖಾಸಗಿ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆ, ನರ್ಸಿಂಗ್ ಹೋಮ್ಗಳು ಹೆಚ್ಚಿನ ಮಟ್ಟಿಗೆ ಮಂತ್ರಿಗಳು ಮತ್ತು ಶಾಸಕರ ಅಧೀನದಲ್ಲಿ ಇವೆ. ಹಾಗಾಗಿ ಅವುಗಳ ತಂಟೆಗೆ ಸರ್ಕಾರ ಹೋಗುವುದಿಲ್ಲ. ಅಂತೆಯೇ ಅವರ ಮಕ್ಕಳು, ಬಂಧು–ಬಳಗ, ಅಳಿಯಂದಿರು ವೈದ್ಯರಾಗಿರುವುದರಿಂದ ವೈದ್ಯರ ವೇತನ ಏರಿಕೆಗೆ ಚುನಾಯಿತ ಪ್ರತಿನಿಧಿಗಳಿಂದ ಒತ್ತಡ ಬರುತ್ತಿರಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.