ಹಿಂದೆಲ್ಲಾ ಕತೆ, ಕಾದಂಬರಿ, ವಾರಪತ್ರಿಕೆಗಳಲ್ಲಿನ ಧಾರಾವಾಹಿಗಳನ್ನು ಓದಿ ಜನರು ಅವುಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಇದರಿಂದ ಓದಿನ ಕುತೂಹಲ ಹೆಚ್ಚಿ, ಹಲವರು ಒಳ್ಳೆಯ ಪುಸ್ತಕಗಳನ್ನು ಖರೀದಿಸುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕನ್ನಡ ಪುಸ್ತಕ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ.
ಮೊನ್ನೆ ಮೈಸೂರಿನಲ್ಲಿ ನಡೆದ 83ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಯಂತ ಕಾಯ್ಕಿಣಿಯವರು ದಿನವಿಡೀ ಪುಸ್ತಕ ಮಳಿಗೆಗಳಲ್ಲೇ ಸುತ್ತಾಡಿದ್ದರು. ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಸಾಹಿತ್ಯಾಸಕ್ತರು ಮುಗಿಬಿದ್ದಿದ್ದರು. ಓದುಗರು ಪುಸ್ತಕ ಖರೀದಿಸಿದಾಗ, ಅದರ ಮೇಲೆ ಹಸ್ತಾಕ್ಷರ ಹಾಕಿ ಸೆಲ್ಫಿ ತೆಗೆಯಲು ಅವರು ಪ್ರೇರೇಪಿಸಿದ್ದು ಶ್ಲಾಘನೀಯ.
ಪುಸ್ತಕ ಖರೀದಿಸಿದ ಕೆಲವರಾದರೂ ಅದನ್ನು ಓದಲಿ ಎಂಬುದು ಅವರ ಆಶಯ. ಅವರೇ ಹೇಳಿದಂತೆ ‘ಮೈಸೂರು ಸಾಹಿತ್ಯ ಸಮ್ಮೇಳನದ ಪುಸ್ತಕಗಳ ಅಂಗಡಿಗಳಲ್ಲಿ ನನ್ನ ಓದುಗರೊಂದಿಗೆ, ಅಭಿಮಾನಿಗಳೊಂದಿಗೆ ಒಡನಾಡಿದೆ. ಇದೇ ನನ್ನ ಪಾಲಿನ ಅಮೂಲ್ಯ ಕ್ಷಣ... ಅವರೆಲ್ಲರ ಪ್ರೀತಿಗೆ ವಿನೀತನಾಗಿದ್ದೇನೆ’. ಇದು, ಕನ್ನಡ ಕಟ್ಟುವ ಪ್ರಯತ್ನ. ಜೊತೆಗೆ ಪುಸ್ತಕದ ‘ರುಚಿ’ (ಗೀಳು) ಹತ್ತಿಸುವ ಪರಿ.