ಕಳೆದ ಕೆಲವು ದಿನಗಳಿಂದ ಶಿರಂಕಳ್ಳಿ, ಬರಗಿ ಫಾರಂ, ಬರಗಿ, ಹೊಂಗಳ್ಳಿ, ದೇಶಿಪುರ, ಮುಕ್ತಿ ಕಾಲೋನಿ, ಮುಂಟೀಪುರ, ಮುಖಹಳ್ಳಿ ಮತ್ತು ಹೊನ್ನಶೆಟ್ಟರಹುಂಡಿ ಗ್ರಾಮಗಳ ಸುತ್ತಲೂ ಕಾಡು ಪ್ರಾಣಿಗಳಾದ ಆನೆ ಮತ್ತು ಹಂದಿಗಳ ರಂಪಾಟ ಅತಿರೇಕ ಕಂಡಿದ್ದು ರೈತರು ಪ್ರತಿ ಕ್ಷಣವೂ ಜೀವ ಭಯದಿಂದ ಪರಿತಪಿಸುವಂತಾಗಿದೆ.
ಈ ಕಾಡು ಪ್ರಾಣಿಗಳ ಹಾವಳಿಯಿಂದ ಕಟಾವಿಗೆ ಬಂದಿದ್ದ ನೂರಾರು ಎಕರೆ ಕಬ್ಬು, ಮುಸುಕಿನ ಜೋಳ ಮತ್ತು ತರಕಾರಿ ಫಸಲು ಈಗಾಗಲೇ ಸಂಪೂರ್ಣವಾಗಿ ನಾಶವಾಗಿದ್ದು, ಸಂಬಂಧ ಪಟ್ಟ ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಿ ಮತ್ತು ದೂರವಾಣಿ ಕರೆ ಮಾಡಿ ಕ್ರಮಕೈಗೊಳ್ಳುವಂತೆ ಅಂಗಲಾಚಿ ಬೇಡಲಾಗಿದೆ.
ಆದರೂ ಅರಣ್ಯ ಇಲಾಖೆಯಾಗಲಿ, ತಹಸೀಲ್ದಾರರಾಗಲಿ ಯಾವುದೇ ತೆರೆನಾದ ಸೂಕ್ತ ಕ್ರಮ ಕೈಗೊಳ್ಳದೇ ಇರುವುದರಿಂದ ರೈತರು ಬೆಳೆ ನಾಶದ ನೋವಲ್ಲದೇ, ರಾತ್ರಿ ಇಡೀ ತಮ್ಮ ಪಂಪ್ ಸೆಟ್ ಹೊಲಗಳಲ್ಲಿ ಯಾವಾಗ ಏನಾಗುವುದೋ ಎಂಬ ಆತಂಕದಿಂದ ಇರುವ ಅಷ್ಟು ಇಷ್ಟು ಬೆಳೆ ಉಳಿಸಿಕೊಳ್ಳಲು ಕಾವಲು ಕಾಯುವ ದುಃಸ್ಥಿತಿ ಬಂದೊದಗಿರುವುದು ರೈತರನ್ನು ಚಿಂತೆಗೀಡುಮಾಡಿದೆ.