ಇತೀಚೆಗೆ ಶಾಸಕರೊಬ್ಬರು ‘ಎರಡು ವರ್ಷ ಖಾಲಿ ಕುಳಿತು ಸಾಕಾಗಿದೆ...’ ಎಂದು ಹೇಳಿದ್ದಾರೆ (ಪ್ರ.ವಾ., ಸೆ. 26). ಇದರಿಂದ ಅವರು ಮತದಾರರಿಗೆ ಯಾವ ಸಂದೇಶ ಕೊಡುತ್ತಿದ್ದಾರೆ? ಸಚಿವರಾಗದಿದ್ದರೆ ಜನಸೇವೆ ಮಾಡಲು ಸಾಧ್ಯವೇ ಇಲ್ಲ ಎನ್ನುವ ಅಭಿಪ್ರಾಯ ಯಾಕೆ ನಮ್ಮ ಜನಪ್ರತಿನಿಧಿಗಳಿಗೆ?
ಸಮಾಜದಲ್ಲಿ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಜನಸೇವೆ ಮಾಡುತ್ತಿರುವವರು ಬಹಳಷ್ಟು ಮಂದಿ ಇದ್ದಾರೆ. ಇಂಥವರು ಕೆಲ ಹಿಂದುಳಿದ ಹಳ್ಳಿಗಳ ಜನರ ಜೀವನ ಮಟ್ಟವನ್ನು ಮೇಲೆತ್ತುವಲ್ಲಿ ಸಫಲರೂ ಆಗಿದ್ದಾರೆ. ಅವರಿಗೆ ಸರ್ಕಾರದ ಯಾವ ಸಹಾಯವೂ ಇರುವುದಿಲ್ಲ.
ಇಂತಹವರೆಲ್ಲ, ‘ಖಾಲಿ ಕುಳಿತು ಸಾಕಾಗಿದೆ’ ಎನ್ನುವ ಜನಪ್ರತಿನಿಧಿಗಳಿಗೆ ಮಾದರಿಯಾಗಲಿ. ಶಾಸಕರು ಮತ್ತು ಸಚಿವರು ತಮ್ಮ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನವನ್ನು ಯಾವ ರೀತಿ ಜನಪರ ಯೋಜನೆಗಳಿಗೆ ಉಪಯೋಗಿಸಿದ್ದೇವೆ ಎಂಬುದನ್ನು ಅಂಕಿಅಂಶ ಸಮೇತ ಮತದಾರರಿಗೆ ತಿಳಿಸಲಿ.