ಗೋಹತ್ಯೆ ನಿಷೇಧದ ವಿಷಯ ಪ್ರಸ್ತಾಪವಾಗುತ್ತಲೇ ಆಕಾಶ–ಭೂಮಿ ಒಂದಾಗುವಂತೆ ಹಲವರು ಬೊಬ್ಬೆ ಹಾಕತೊಡಗುತ್ತಾರೆ. ಈ ವಿಚಾರದಲ್ಲಿ ನನ್ನಲ್ಲಿ ಒಂದಿಷ್ಟು ಪ್ರಶ್ನೆಗಳಿವೆ:
ಕೆಲವರ ಆಹಾರದ ಹಕ್ಕು ಕಸಿಯಲಾಗುತ್ತಿದೆ ಅನ್ನುವ ಮಂದಿ, ಗೋವುಗಳ ಬದುಕುವ ಹಕ್ಕಿನ ವಿಚಾರದಲ್ಲಿ ಮಾತನಾಡುವುದೇ ಇಲ್ಲ! (ಯಾಕೆಂದರೆ– ಅವು ಮಾನವರಂತೆ ಶ್ರೇಷ್ಠ(?) ಜೀವಿಗಳಲ್ಲವಲ್ಲಾ!) ‘ಹಲವರ ಆಹಾರದ ಹಕ್ಕನ್ನು ಕಿತ್ತುಕೊಳ್ಳಲು ಮೋದಿ ಯಾರು’ ಅಂತ ಪ್ರಶ್ನಿಸುವವರಿಗೆ ‘ಗೋವುಗಳ ಬದುಕುವ ಹಕ್ಕನ್ನು ಕಿತ್ತುಕೊಳ್ಳಲು ನೀವಾರು’ ಅಂತ ಕೇಳಬೇಕಾಗುತ್ತದೆ.
ಒಂದನ್ನು ತಿಂದೇ ಇನ್ನೊಂದು ಬದುಕುವುದು ಅಂತಾದರೆ ಮಾನವನನ್ನು ತಿಂದು ಬದುಕುವ ಪ್ರಾಣಿ ಯಾವುದು? ಹುಲಿ, ಸಿಂಹ, ಚಿರತೆ ಇತ್ಯಾದಿ ಮಾಂಸಾಹಾರಿ ಪ್ರಾಣಿಗಳಿಗೆ ಮಾಂಸವನ್ನು ಬಿಟ್ಟು ಬೇರೆ ಪರ್ಯಾಯವೇ ಇಲ್ಲ. ಹಾಗಾಗಿ, ಅನಿವಾರ್ಯವಾಗಿ ಅವು ಇನ್ನೊಂದು ಪ್ರಾಣಿಯ ಹತ್ಯೆ ಮಾಡುತ್ತವೆ. ಆದರೆ, ಅವು ಮಾನವನಂತೆ ಆಹಾರಕ್ಕಾಗಿ ಪ್ರಾಣಿಗಳನ್ನು ಸಾಕಿಕೊಳ್ಳುವುದಿಲ್ಲ! ಆದರೆ, ಮಾನವನ ಸಮಾಚಾರ ಹಾಗಲ್ಲ. ಅವನಿಗೆ ಬೇಕಾದಷ್ಟು ಮಾಂಸೇತರ ಪರ್ಯಾಯ ಆಹಾರಗಳಿವೆ.
ಪ್ರಾಣಿ ಪ್ರಪಂಚದಲ್ಲೇ ಮಾನವನು ಶ್ರೇಷ್ಠ ಜೀವಿ ಅಂತ ಹೇಳುವವರು ತಮ್ಮ ಹಸಿವನ್ನು ನೀಗಿಸಿಕೊಳ್ಳುವ ಸ್ವಾರ್ಥದಿಂದ ಪ್ರಾಣಿಗಳನ್ನು ನಿಷ್ಕರುಣೆಯಿಂದ, ಅಮಾನುಷವಾಗಿ ಕೊಲ್ಲುತ್ತಾರೇಕೆ? ಇದೇನಾ ಶ್ರೇಷ್ಠತೆಯ ಮಾನದಂಡ? ಪ್ರಾಣಿ ಲೋಕದಲ್ಲಿ ಸಸ್ಯಾಹಾರಿಯಾದ ಯಾವುದಾದರೂ ಪ್ರಾಣಿ ಇನ್ನೊಂದು ಪ್ರಾಣಿಯನ್ನು ಆಹಾರಕ್ಕಾಗಿ ಕೊಲ್ಲುವುದನ್ನು ನೀವೆಲ್ಲಾದರೂ ಕಂಡಿದ್ದೀರಾ?