‘ಸರ್ಕಾರದ ಕೆಲಸ, ದೇವರ ಕೆಲಸ’ ಎಂದು ವಿಧಾನ ಸೌಧದ ಹೆಬ್ಬಾಗಿಲಿನ ಮೇಲೆ ಬರೆಯಲಾಗಿದೆ. ಆದರೆ ಸದನದಲ್ಲಿ ಆಸೀನರಾ ಗುವವರಿಗೆ ಇರಬೇಕಾದ ಗತ್ತು, ಗಾಂಭೀರ್ಯ ಮರೆಯಾಗುತ್ತಿದೆ. ಅವರು ಬಟ್ಟೆ ಹರಿಯುವುದು ಮತ್ತು ಅಶ್ಲೀಲ ಚಿತ್ರ ವೀಕ್ಷಣೆಯಲ್ಲಿ ತೊಡಗಿದ್ದು ಇದೆ.
ನಾವು ಪತ್ರಿಕೋದ್ಯಮದ ವಿದ್ಯಾರ್ಥಿಗಳು ಫೆಬ್ರುವರಿ ೨೧ ರಂದು ಸದನದ ಕಲಾಪವನ್ನು ವೀಕ್ಷಿಸಲು ವಿಧಾನ ಸೌಧಕ್ಕೆ ಹೋಗಿದ್ದೆವು. ಅಲ್ಲಿ ನಮಗೆ ಪ್ರವೇಶ ಸುಲಭವಾಗಿ ದೊರೆಯಲಿಲ್ಲ. ಸುಮಾರು ಅರ್ಧ ತಾಸು ಹೊರಗಡೆ ಕಾದ ನಂತರವಷ್ಟೇ ಸೌಧದ ಮೆಟ್ಟಿಲು ಏರಲು ಅನುಮತಿ ದೊರೆಯಿತು. ಮೂರು– ನಾಲ್ಕು ಕಡೆ ತಪಾಸಣೆ ಮಾಡಿದ ನಂತರ ಪ್ರೇಕ್ಷಕರ ಗ್ಯಾಲರಿಯ ಕೊನೆಯ ಗೇಟ್ ತಲುಪಿದೆವು.
ಆದರೆ ಅಲ್ಲಿನ ಮಾರ್ಷಲ್ಗಳು ೨೦ ನಿಮಿಷಗಳ ತರಗತಿಯನ್ನೇ ನಡೆಸಿದರು. ಅದೇನೆಂದರೆ ‘ನೇರವಾಗಿ ಕುಳಿತುಕೊಳ್ಳಬೇಕು, ಕೈ-ಕಾಲುಗಳನ್ನು ಅಲುಗಾಡಿಸಬಾರದು, ಮುಂದೆ ಬಾಗಬಾರದು, ಅತ್ತ- ಇತ್ತ ವಾಲಬಾರದು’ ಹೀಗೆ ಪಟ್ಟಿ ಬೆಳೆಯುತ್ತಾ ಹೋಯಿತು. ಇಂತಹ ತರಬೇತಿಯನ್ನು ಮಾರ್ಷಲ್ಗಳು ಮೊದಲು ನಮ್ಮ ಜನಪ್ರತಿನಿಧಿಗಳಿಗೆ ಕೊಡಲಿ. ಆಗಲಾದರೂ ರಾಜ್ಯದ ಮರ್ಯಾದೆ ಉಳಿಯುತ್ತದೇನೋ.