ಹೊಸಪೇಟೆ ಬಳಿಯ ಬಸವನದುರ್ಗ ಎಂಬ ಹಳ್ಳಿಯ ದಲಿತಕೇರಿಯಲ್ಲಿ ೩೦೦ ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವುದು ಮತ್ತು ಅನೇಕರು ಡೆಂಗೆಯಿಂದ ಬಳಲಿರುವುದು ಕಂಡು ಬರುತ್ತಿದೆ. ಆರೋಗ್ಯ ಇಲಾಖೆ ಅತ್ತ ಗಮನವನ್ನೇ ಕೊಟ್ಟಿರಲಿಲ್ಲ. ಸ್ಥಳೀಯ ಹೋರಾಟಗಾರರ ಮತ್ತು ಕೆಲ ಮಾಧ್ಯಮಗಳ ಒತ್ತಾಸೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಈಗ ಕೊಪ್ಪಳದ ಸಮೀಪದಲ್ಲಿರುವ ಹಿಟ್ನಾಳ ಗ್ರಾಮದ ದಲಿತಕೇರಿಯಲ್ಲಿ ಸುಮಾರು ೨೦೦ ಜನ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವುದು ವರದಿಯಾಗಿದೆ.
ಹಾಗೆ ನೋಡಿದರೆ ಹೈದರಾಬಾದ್ ಕರ್ನಾಟಕದ ಬಹುತೇಕ ಹಳ್ಳಿಗಳ ದಲಿತರ ಕೇರಿಗಳಲ್ಲಿ ವಾಸಿಸುತ್ತಿರುವವರು ಅನಾರೋಗ್ಯ ದಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ, ಮಾಲಿನ್ಯ ಮತ್ತು ಅಶುದ್ಧ ಕುಡಿಯುವ ನೀರಿನ ಸರಬರಾಜು. ಇದಲ್ಲದೆ ಸಂಬಂಧಿಸಿದವರು ಅಲ್ಲಿನ ಚರಂಡಿಗಳನ್ನು ಸ್ವಚ್ಛ ಮಾಡುತ್ತಿಲ್ಲ. ಸೊಳ್ಳೆ, ನೊಣಗಳ ಕಾಟವು ವಿಪರೀತವಾಗಿವೆ. ಹೀಗಾಗಿ ಇಲ್ಲಿಯ ಜನ ಸದಾ ಒಂದಲ್ಲಾ ಒಂದು ರೋಗದಿಂದ ಬಳಲುತ್ತಿದ್ದಾರೆ. ಆದ್ದರಿಂದ ಆರೋಗ್ಯ ಇಲಾಖೆ ಇತ್ತ ಗಮನಹರಿಸಬೇಕಿದೆ.
ದಲಿತಕೇರಿಗಳಿಗೆ ಪ್ರತ್ಯೇಕವಾದ ಆರೋಗ್ಯ ಕೇಂದ್ರವನ್ನು ಸ್ಥಾಪಿಸಬೇಕು. ಚರಂಡಿ ಮತ್ತು ನೀರುಗುಂಡಿಗಳನ್ನು ಸ್ವಚ್ಛವಾಗಿಡಬೇಕು. ಕುಡಿಯಲು ಶುದ್ಧವಾದ ನೀರಿನ ಪೂರೈಕೆಯಾಗಬೇಕು. ಆರೋಗ್ಯಕರ ಮೂಲ ಸೌಕರ್ಯಗಳು ದಲಿತಕೇರಿಗಳಿಗೆ ಸಿಗುವಂತಾದರೆ ಮಾತ್ರ ದಲಿತರು ಆರೋಗ್ಯದಿಂದ ಬದುಕಬಹುದು. ಈ ನಿಟ್ಟಿನಲ್ಲಿ ಆರೋಗ್ಯ ಮಂತ್ರಿಗಳು ಗಮನಹರಿಸಿ ಕಾರ್ಯಪ್ರವ್ರತ್ತ-ರಾಗಬೇಕಾಗಿದೆ. ದಲಿತ ಸಮುದಾಯದ ಬಗ್ಗೆ ಕಾಳಜಿಯುಳ್ಳ ಸಮಾಜಕಲ್ಯಾಣ ಸಚಿವ ಎಚ್.ಆಂಜನೇಯ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಈ ಕ್ಷೇತ್ರದ ಶಾಸಕರು ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕಾಗಿದೆ.