ಐಎಎಸ್ ಅಧಿಕಾರಿ ದುರ್ಗಾಶಕ್ತಿ ನಾಗಪಾಲ್ ಅವರ ಅಮಾನತು ವಿಚಾರದಲ್ಲಿ ಕೇಂದ್ರದ ಯುಪಿಎ ಸರ್ಕಾರ ಮತ್ತು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸರ್ಕಾರ ಮಧ್ಯೆ ನಡೆದಿರುವ ಜಟಾಜಟಿ ಸಹಜವಾದುದೇ. ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಅದಕ್ಕೂ ಮೊದಲು ಇಂತಹ ನಾಟಕಗಳು ನಡೆಯಲೇಬೇಕಲ್ಲವೇ?
ಆದರೆ `ದುರ್ಗಾಶಕ್ತಿ'ಯನ್ನು ಅಮಾನತು ಮಾಡಿದ ಬಗ್ಗೆ ಐಎಎಸ್ ಅಧಿಕಾರಿಗಳ ಸಂಘಟನೆಯು ಬೊಬ್ಬೆ ಹಾಕುತ್ತಿರುವುದನ್ನು ನೋಡಿ ನಗೆ ಬರುತ್ತಿದೆ. ತಮಗಿರುವ ಅಧಿಕಾರವನ್ನು ಬಳಸಿ ಭ್ರಷ್ಟಾಚಾರವನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ಅವಕಾಶವಿದ್ದರೂ ಅದನ್ನು ಮಾಡದೇ ಇರುವುದು ಇದೇ ಅಧಿಕಾರಿ ವರ್ಗ, ಅಲ್ಲವೇ?
ಕೆರೆಕಟ್ಟೆಗಳ ಒತ್ತುವರಿಯನ್ನು ಪ್ರಶ್ನೆ ಮಾಡಲಿಲ್ಲ. ಕಾಡುಗಳ್ಳರಿಗೆ ಶಿಕ್ಷೆ ಕೊಡಿಸಲಿಲ್ಲ. ಸರ್ಕಾರಿ ಜಮೀನನ್ನು ಒತ್ತೆಯಿಟ್ಟರು.
ಗಣಿಗಳ್ಳರು ನಕ್ಷೆ ಬದಲಾಯಿಸಿದರೂ ಕಣ್ಣು ಮುಚ್ಚಿಕೊಂಡರು. ಅದಿರು ಲೂಟಿಯಾದರೂ ಅದಕ್ಕೆ ಸಹಕರಿಸಿದರು. ಭ್ರಷ್ಟ ರಾಜಕಾರಣಿಗಳ ಜೊತೆಗೆ ತಾವೂ ಉಣ್ಣಲು ಕುಳಿತರು.
ಸಂಸತ್ ಸದಸ್ಯ ನರೇಶ್ ಅಗರವಾಲ್ ಹೇಳಿದಂತೆ ವಶೀಲಿಬಾಜಿ ಶುರು ಹಚ್ಚಿಕೊಂಡರು. ರಾಜಕಾರಣಿಗಳು ಬಗ್ಗು ಎಂದರೆ ಇವರು ತೆವಳಿದರು. ಭ್ರಷ್ಟಾಚಾರ ಬೃಹದಾಕಾರ ತಾಳುವವರೆಗೂ ತಟಸ್ಥರಾಗಿದ್ದು ಈಗ ಪ್ರಾಮಾಣಿಕರ ಬಗ್ಗೆ ಕನಿಕರ ತೋರಿಸಿದರೆ ನಗದೇ ಇರಲು ಸಾಧ್ಯವೇ?