ಇತ್ತೀಚೆಗೆ ಗುಜರಾತಿಗೆ ಭೇಟಿ ನೀಡಿ ಹಿಂದಿರುಗಿದ ಮುಖ್ಯಮಂತ್ರಿ ಸದಾನಂದ ಗೌಡರು ಗುಜರಾತ್ ಮಾದರಿ ಆಡಳಿತ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರೂ ಇದೇ ರೀತಿಯ ಹೇಳಿಕೆ ನೀಡಿದ್ದರು. ಅದಕ್ಕೂ ಮುಂಚೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತಕುಮಾರ್ ಕೂಡಾ ಅಂತಹದೇ ಹೇಳಿಕೆ ನೀಡಿದ್ದರು.
2002ರ ಗುಜರಾತ್ ನರಮೇಧದ ಹಿನ್ನೆಲೆಯಲ್ಲಿ ಸಹಜವಾಗಿಯೇ ನಮಗೆಲ್ಲಾ ಆತಂಕವಾಗಿತ್ತು. ಆದರೆ ಆನಂತರ ಗುಜರಾತಿನ ಅಭಿವೃದ್ಧಿಯ ದಾರಿಯನ್ನು ಮಾಧ್ಯಮಗಳ ಒಂದು ವಿಭಾಗ ಹಾಡಿ ಹೊಗಳುವ ಜತೆಯಲ್ಲೇ ಅಲ್ಲಿ ಶಾಂತಿ ನೆಮ್ಮದಿ ನೆಲೆಸಿದೆ.
ಹವಾನಿಯಂತ್ರಿತ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ `ಒಂದು ರೀತಿಯ~ ಪಶ್ಚಾತ್ತಾಪದ ಮಾತುಗಳನ್ನಾಡಿದಾಗ ಪರವಾಯಿಲ್ಲಾ ಅವರಲ್ಲೂ `ಮಾನವೀಯ ಹೃದಯ~ ಇದೆ ಎಂದು ಜನರು ಸಮಾಧಾನಪಟ್ಟುಕೊಂಡಿದ್ದರು. ಕೆಳ ಮಟ್ಟದ ನ್ಯಾಯಾಲಯದಲ್ಲಿ ಮೊಕದ್ದಮೆ ಇತ್ಯರ್ಥವಾಗಲಿ ಎಂದು ಸರ್ವೋಚ್ಚ ನ್ಯಾಯಾಲಯ ಮೊಕದ್ದಮೆ ಹಿಂದಕ್ಕೆ ಕಳಿಸಿದ್ದನ್ನೇ `ತನಗೆ ಸಿಕ್ಕ ಕ್ಯಾರೆಕ್ಟರ್ ಸರ್ಟಿಫಿಕೇಟ್~ ಎಂದು ಬಗೆದು ಅಲ್ಲಿಯ ಐಪಿಎಸ್ ಅಧಿಕಾರಿ ಸಂಜೀವ ಭಟ್ರನ್ನು ಮೋದಿ ನಡೆಸಿಕೊಳ್ಳುತ್ತಿರುವ ರೀತಿ ನೋಡಿದಾಗ, ಅವರ ಮನಪರಿವರ್ತನೆಯಾಗಿದೆ ಎಂದು ನಂಬಿದ್ದ ಜನರಿಗೆ ನಿಜವಾದ ಮೋದಿ ಏನೆಂಬ ಎಂಬ ಸತ್ಯ ಮನವರಿಕೆಯಾಗುತ್ತಿದೆ.
ಸಂಜೀವ ಭಟ್ರ ಅಪರಾಧವಾದರೂ ಏನು? 2002ರ ಗುಜರಾತ್ ನರಮೇಧದ ಸಮಯದಲ್ಲಿ ` ಮುಖ್ಯಮಂತ್ರಿ ಹಾಗೂ ಇಡೀ ಆಡಳಿತ ಯಂತ್ರ ಅಲ್ಪಸಂಖ್ಯಾತರ ವಿರುದ್ಧದ ಕಾರ್ಯಾಚರಣೆಯಲ್ಲಿ ಶಾಮೀಲಾಗಿತ್ತು~ ಎಂಬುದಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದ್ದರು. ಈಗ ಈ ಪ್ರಕರಣ ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಿದೆ.
ಗುಜರಾತಿನಲ್ಲಿ ದ್ವೇಷದ ರಾಜಕಾರಣ ತಾಂಡವವಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಂತಹ ಗುಜರಾತ್ ಮಾದರಿಯ ವಿಷಪೂರಿತ ಅಭಿವೃದ್ಧಿ ರಾಜಕಾರಣ ನಮಗೆ ಖಂಡಿತಾ ಬೇಡ.