ವರದಿಗಾರ್ತಿಯೊಬ್ಬರ ಪ್ರಶ್ನೆಗೆ ಬಿಜೆಪಿ ಮುಖಂಡ ಈಶ್ವರಪ್ಪನವರು ತುಚ್ಛವಾಗಿ ಉತ್ತರ ನೀಡಿದ್ದು ನಿಜಕ್ಕೂ ಆಘಾತಕಾರಿ ಮತ್ತು ಅವಮಾನಕರ. ರಾಜಕಾರಣಿಗಳು ಏನು ಹೇಳಿದರೂ, ಹೇಗೆ ವರ್ತಿಸಿದರೂ ನಡೆಯುತ್ತದೆ ಎನ್ನುವ ಕಾಲ ಹೋಗುತ್ತಿದೆ. ಹಾಗಾಗಿ, ಇನ್ನು ಮುಂದೆ ಅವರು ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಮಾತನಾಡುವಾಗ ಸರಿಯಾಗಿ ಯೋಚಿಸಿ ಅಳೆದೂ ತೂಗಿ ಮಾತನಾಡುವುದೊಳಿತು.
ಮನಸ್ಸಿಗೆ ತೋಚಿದಂತೆ, ಬಾಯಿಗೆ ಬಂದಂತೆ ಮಾತನಾಡಿ ನಂತರ ತಮ್ಮ ಹೇಳಿಕೆಗಳನ್ನು ತಿರುಚಿ ಬರೆದಿದ್ದಾರೆಂದು ಹೇಳಿ ಕ್ಷಮಾಪಣೆ ಕೇಳುವುದು ಒಂದು ಪಡಿಪಾಟಲಾಗಿದೆ. ಜನರ ಮನಸ್ಸಿಗುಂಟಾದ ನೋವನ್ನು ಕಾಟಾಚಾರದ ಹೇಳಿಕೆ, ಕ್ಷಮಾಪಣೆಗಳಿಂದ ಸರಿಪಡಿಸಲಾಗದು. ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಸರಿಯಾಗಿ ಮಾತನಾಡಲು ಬರದಿರುವವರು ಮತ್ತು ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸಲು ಬಾರದಿರುವವರು ರಾಜಕೀಯದಿಂದ ನಿವೃತ್ತಿ ಪಡೆಯುವುದೊಳಿತು.