‘ಕಾವೇರಿ ನೀರಿನ ಮಿತ ಬಳಕೆ ಕುರಿತು ನಗರದಲ್ಲಿ ಜನ ಜಾಗೃತಿ’, ‘ಇಸ್ರೇಲ್ ಮಾದರಿಗೆ ಜಲಮಂಡಳಿ ಮೊರೆ’, ‘ನಗರದ ಹೊರವಲಯದಲ್ಲಿ ನೀರಿಗೆ ತತ್ವಾರ’ ಶೀರ್ಷಿಕೆಗಳಡಿ ಪ್ರಕಟವಾದ ಸುದ್ದಿಗಳು (ಪ್ರ.ವಾ., ಏ. 19) ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.
ಬೆಂಗಳೂರು ನಗರಕ್ಕೆ ಪ್ರತಿದಿನ ಪೂರೈಕೆಯಾಗುವ ನೀರಿನಲ್ಲಿ ಶೇಕಡ 44ರಷ್ಟು ನೀರು ಲೆಕ್ಕಕ್ಕೆ ಸಿಗುತ್ತಿಲ್ಲ. ಅಂದರೆ 60 ಕೋಟಿ ಲೀಟರ್ ನೀರು ಕಳವು ಮತ್ತು ಪೋಲು ಆಗುತ್ತಿದೆ ಎಂಬುದು ಜಲ ಮಂಡಳಿಗೆ ತಿಳಿದಿದೆ. ಕಾವೇರಿ ನೀರನ್ನು ದೊಡ್ಡ ಮೈದಾನಗಳಿಗೆ, ರಸ್ತೆಗಳಿಗೆ ಬೃಹತ್ ಪ್ರಮಾಣದಲ್ಲಿ ಬಳಸುವ ಬಗ್ಗೆ ಮಾಧ್ಯಮಗಳಲ್ಲಿ ಈಗಾಗಲೇ ಸುದ್ದಿ ಪ್ರಕಟವಾಗಿದೆ.
ನೀರಿನ ಮಿತ ಬಳಕೆಯ ಬಗ್ಗೆ ಜನಜಾಗೃತಿ ಮೂಡಿಸುವ ಜಲ ಮಂಡಳಿಯ ಹೆಜ್ಜೆ ಒಳ್ಳೆಯದೆ. ಆದರೆ ಲೆಕ್ಕಕ್ಕೆ ಸಿಗದ ನೀರನ್ನು ಉಳಿಸುವಲ್ಲಿ ಈ ಕ್ರಮ ಪ್ರಯೋಜನ
ವಾಗಲಾರದು. ಕಸದ ವಿಲೇವಾರಿಯಾಗಲಿ, ಆಸ್ತಿ ತೆರಿಗೆ ಪಾವತಿಯಲ್ಲಾಗಲಿ ಮತ್ತು ನೀರಿನ ಉಳಿಕೆ ಬಗ್ಗೆಯಾಗಲಿ ಜನಜಾಗೃತಿ ಮೂಡಿಸುವ ಯತ್ನ ನಿಗದಿತ ಸಮಯದಲ್ಲಿ ಫಲಿತಾಂಶ ಕೊಡಲಾರದು.
ನೀರು ಯಾಕೆ ಲೆಕ್ಕಕ್ಕೆ ಸಿಗುತ್ತಿಲ್ಲ, ಯಾಕೆ ಪೋಲಾಗುತ್ತಿದೆ, ಈ ಮೂಲಕ ಪ್ರತಿ ದಿನ ಕೋಟ್ಯಂತರ ಲೀಟರ್ ನೀರನ್ನು ಹೇಗೆ ಉಳಿಸಬಹುದು ಎಂಬ ನೀಲ ನಕ್ಷೆಯನ್ನು ಜಲ ಮಂಡಳಿ ರೂಪಿಸಲಿ. ಚಿಕ್ಕಪುಟ್ಟ ಬಳಕೆದಾರರು ಕೈ ತೋಟಕ್ಕೆ ಮತ್ತು ಕಾರು ತೊಳೆಯಲು ಉಪಯೋಗಿಸುವ ಅಲ್ಪ ಪ್ರಮಾಣದ ನೀರಿನ ಉಳಿಕೆಯು ಲೆಕ್ಕಕ್ಕೆ ಸಿಗದ, ಕಳುವಾಗುವ 60 ಕೋಟಿ ಲೀಟರ್ ನೀರಿಗಿಂತ ಹೆಚ್ಚಿನದೇ?