ಒಂದೆಡೆ, ಕರ್ನಾಟಕ ಲೋಕಸೇವಾ ಆಯೋಗದಿಂದ ಅಕ್ರಮವಾಗಿ ಆಯ್ಕೆಯಾಗಿದ್ದಾರೆ ಎಂದು ಸಾಬೀತಾದ ಅನೇಕ ಕೆಎಎಸ್ ಅಧಿಕಾರಿಗಳನ್ನು ರಕ್ಷಿಸುವುದರ ಜೊತೆಗೆ, ಅವರನ್ನು ಈಗ ಐಎಎಸ್ ದರ್ಜೆಗೆ ಏರಿಸುವ ತರಾತುರಿಯಲ್ಲಿ ಸರ್ಕಾರ ಇದೆ. ಮತ್ತೊಂದೆಡೆ, ಆಯೋಗದ ಅಧ್ಯಕ್ಷರಾಗಿದ್ದ ಗೋನಾಳ ಭೀಮಪ್ಪ ಅವರ ರಕ್ಷಣೆಗೆ ಬದ್ಧ ಎಂದು ಸಮಾಜ ಕಲ್ಯಾಣ ಸಚಿವರು ಹೇಳಿದ್ದಾರೆ (ಪ್ರ.ವಾ.,ಮೇ 19).
ಭೀಮಪ್ಪನವರು ಆಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವ್ಯವಹಾರ ನಡೆಸಿರುವ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸಿ ಈಗ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಅಂತಹವರನ್ನು ರಕ್ಷಿಸುವುದಾಗಿ ಸಚಿವರೇ ಹೇಳಿರುವುದು ಎಷ್ಟು ಆಘಾತಕಾರಿ ಎಂಬ ಸಂಗತಿ ಅವರಿಗೆ ಗೊತ್ತಿಲ್ಲವೇನೋ!
ಭೀಮಪ್ಪ ತಮ್ಮ ತಂಗಿಯ ಪತಿ ಎಂದು ಸಚಿವರು ಹೇಳಿಕೊಂಡಿದ್ದಾರೆ.
‘ಯಾವುದೇ ಪಕ್ಷಪಾತ ಅಥವಾ ಭಯವಿಲ್ಲದೆ...’ ಎಂದು ಪ್ರಮಾಣವಚನ ಸ್ವೀಕರಿಸುವಾಗ ಹೇಳಿದ್ದು ಸಚಿವರಿಗೆ ಮರೆತು ಹೋಯಿತೇ? ಅಂದಮೇಲೆ ಭ್ರಷ್ಟಾಚಾರ ಯಾವ ಹಂತ ಮುಟ್ಟುತ್ತಿದೆಯೆಂದು ತಿಳಿಯಲು ಬೇರೆ ಕನ್ನಡಿ ಬೇಕಿಲ್ಲ. ಭೀಮಪ್ಪನವರ ತಪ್ಪಿಲ್ಲದಿದ್ದರೆ ಅವರು ನಿರಪರಾಧಿಯಾಗಿ ಹೊರಬರುತ್ತಾರೆ. ಇದರಲ್ಲಿ ಸಚಿವರ ಪಾರುಪತ್ಯ ಏಕೆ? ಇದಕ್ಕೆ ಮಾಜಿ ಪ್ರಧಾನಿಯವರ ಕುಮ್ಮಕ್ಕು ಬೇರೆ!