ಇತ್ತೀಚೆಗೆ ಮೈಸೂರಿನಲ್ಲಿ ಚನ್ನಬಸಪ್ಪ ಎಂಬ ಗುತ್ತಿಗೆ ನೌಕರ ರೈಲು ಬೋಗಿಯನ್ನು ಶುಚಿಗೊಳಿಸುವ ಸಂದರ್ಭದಲ್ಲಿ ತಮ್ಮ ಕೈಗೆ ಸಿಕ್ಕ 10 ಲಕ್ಷ ರೂಪಾಯಿಗಳ ಮೌಲ್ಯದ ಚಿನ್ನಾಭರಣಗಳನ್ನು ತನ್ನ ಮೇಲಧಿಕಾರಿಗಳಿಗೆ ಒಪ್ಪಿಸುವ ಮೂಲಕ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
ಲಂಚಕೋರರು, ಭ್ರಷ್ಟರು. ಅಪ್ರಾಮಾಣಿಕರೇ ಹೆಚ್ಚಾಗಿರುವ ಇಂದಿನ ಸಾಮಾಜಿಕ ಸಂದರ್ಭದಲ್ಲಿ ಚನ್ನಬಸಪ್ಪ ಅವರಂಥವರು ಅಪರೂಪ, ಮಾತ್ರವಲ್ಲ ಲಕ್ಷಾಂತರ ಜನರಿಗೆ ಮಾದರಿ.
ಚನ್ನಬಸಪ್ಪ ಅವರನ್ನು ರೈಲ್ವೆ ಇಲಾಖೆ ಗೌರವಿಸಿ ಬಹುಮಾನ ನೀಡಿದೆ. ಅದರಿಂದ ಹೆಚ್ಚಿನ ಪ್ರಯೋಜನ ಇಲ್ಲ. ಅವರ ಶೈಕ್ಷಣಿಕ ಅರ್ಹತೆ ಹಾಗೂ ವಯಸ್ಸನ್ನು ಆಧರಿಸಿ ರೈಲ್ವೆ ಇಲಾಖೆಯಲ್ಲಿ ಯಾವುದಾದರೂ ಕಾಯಂ ಹುದ್ದೆ ನೀಡಬೇಕು.