ಗ್ರಾಮ ಪಂಚಾಯ್ತಿಯಿಂದ ಹಿಡಿದು ಲೋಕಸಭೆವರೆಗಿನ ಚುನಾವಣೆಗಳು ಬಂದಾಗ ಕೆಲವು ಗ್ರಾಮಗಳ ಜನರು ಮತದಾನಕ್ಕೆ ಬಹಿಷ್ಕಾರ ಹಾಕುತ್ತಾರೆ. ತಮ್ಮ ಊರಿನ ಅಭಿವೃದ್ಧಿ ಆಗದೇ ಇರುವುದು ಮತ್ತು ತಮ್ಮ ಬೇಡಿಕೆಗಳನ್ನು ಕಡೆಗಣಿಸಿದ್ದರಿಂದ ಕಂಗೆಟ್ಟು ಮತದಾನಕ್ಕೆ ಬಹಿಷ್ಕಾರ ಹಾಕುತ್ತಾರೆ. ಈ ಮೂಲಕ ಜನಪ್ರತಿನಿಧಿಗಳಿಗೆ ಪಾಠ ಕಲಿಸುವುದು ಅವರ ಉದ್ದೇಶ. ಆದರೆ, ಇದರಿಂದ ಯಾವ ಜನಪ್ರತಿನಿಧಿಯೂ ಪಾಠ ಕಲಿಯುವುದಿಲ್ಲ; ಈವರೆಗೆ ಕಲಿತಿಲ್ಲ. ಮೇಲಾಗಿ ಜನರಿಗೇ ತೊಂದರೆಯಾಗಿದೆ.
ಮತದಾನ ಮಾಡಿಲ್ಲ ಎಂಬ ಕಾರಣಕ್ಕೆ ಅವರ ಸಹಾಯಕ್ಕೆ ಯಾರೂ ಬರುವುದಿಲ್ಲ. ಬಹಿಷ್ಕಾರ ಎಂಬುದು ತಪ್ಪು ಕಲ್ಪನೆ ಹಾಗೂ ಅಪರಾಧ. ಮತದಾರರು ಚುನಾವಣೆಯ ದಿನ ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಇದು ಕರ್ತವ್ಯ ಮತ್ತು ಜವಾಬ್ದಾರಿಯೂ ಹೌದು.