ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ನಗರದ ಕೆರೆಗಳ ಸಂರಕ್ಷಣೆಗೆ ರಾಜ್ಯ ಸರ್ಕಾರದಿಂದ 119 ಕೋಟಿಗಳ ಅನುದಾನ ಕೇಳಿದ್ದಾರೆ. ಕೆರೆಗಳ ಅಭಿವೃದ್ಧಿಗಾಗಿ ಪ್ರತಿ ವರ್ಷವೂ ಮಹಾನಗರ ಪಾಲಿಕೆ ಹಲವಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಉದಾ: ಕೆಂಪಾಂಬುಧಿ ಕೆರೆಗೆ ಪ್ರತಿ ವರ್ಷವೂ ಅಭಿವೃದ್ಧಿ ಹೆಸರಿನಲ್ಲಿ ಭಾರೀ ಹಣ ಖರ್ಚು ಮಾಡುತ್ತಾರೆ. ಆದರೆ ಅದರ ಅಭಿವೃದ್ಧಿ ಪೂರ್ತಿಯಾಗಿಲ್ಲ. ಕಾರಣವೇನು ಎಂಬುದು ಯಾರಿಗೂ ತಿಳಿದಿಲ್ಲ.
ಆಯುಕ್ತರು ತಿಳಿಸಿದಂತೆ ಮಹಾನಗರ ವ್ಯಾಪ್ತಿಯಲ್ಲಿ 132 ಕೆರೆಗಳಿವೆಯಂತೆ. ಇವುಗಳಲ್ಲಿ ಸುಮಾರು 358 ಎಕರೆ ಒತ್ತುವರಿಯಾಗಿದೆ ಎಂದು ತಿಳಿಸಿದ್ದಾರೆ. ಯಾವ ಕೆರೆಯಲ್ಲಿ ಎಷ್ಟು ಎಕರೆ ಒತ್ತುವರಿಯಾಗಿದೆ ಎಂಬ ವಿವರ ಮಾಹಿತಿಯನ್ನು ಅವರು ಸಾರ್ವಜನಿಕರಿಗೆ ಒದಗಿಸಬೇಕು. ಉದಾ: ಕೆಂಪಾಂಬುಧಿ ಕೆರೆ ಸರ್ಕಾರದ ದಾಖಲೆಯ ಪ್ರಕಾರ 47 ಎಕರೆ 7 ಗುಂಟೆ ವಿಸ್ತೀರ್ಣ ಹೊಂದಿದೆ. ಆದರೆ ಗವಿಪುರ ಗ್ರಾಮ ವ್ಯಾಪ್ತಿಯಲ್ಲಿ ಕೆರೆಯ ಪಕ್ಕದಲ್ಲೇ ಇರುವ (ಸರ್ವೆ ನಂ. 75)ಒಂದು ಮಠ ಹಾಗೂ ದೇವಸ್ಥಾನದ ಟ್ರಸ್ಟ್ ಕೆರೆಯ ಪ್ರದೇಶ ನಮಗೆ ಸೇರಿದೆ ಎಂಬ ಫಲಕಗಳನ್ನು ಹಾಕಿಕೊಂಡಿದೆ. ಸಂಬಂಧಪಟ್ಟವರು ಕೂಡಲೇ ಒತ್ತುವರಿಯನ್ನು ತೆರವು ಮಾಡಿ ಕೆರೆಯನ್ನು ರಕ್ಷಣೆ ಮಾಡಬೇಕು ಎಂದು ಆಯುಕ್ತರಲ್ಲಿ ಮನವಿ.