ಬೆಳಗಾವಿ ಜಿಲ್ಲೆಯ ಯಮಕನಮರಡಿಯ ಸರ್ಕಾರಿ ಶಾಲೆ ಕಟ್ಟಡ ಕುಸಿದು ಇಬ್ಬರು ಮಕ್ಕಳು ಮೃತರಾದ ಸುದ್ದಿ ಓದಿ (ಪ್ರ.ವಾ., ಜುಲೈ 12) ಸರ್ಕಾರಿ ಶಾಲಾ ಮಕ್ಕಳ ಸ್ಥಿತಿ ಎಷ್ಟು ಹೀನಾಯ ಎನಿಸಿತು. ಈ ಘಟನೆ ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರಕ್ಕೆ ಇರುವ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.
ಹಿಂದಿನ ಹಾಗೂ ಈಗಿನ ಸರ್ಕಾರಗಳು ಸರ್ಕಾರಿ ಶಾಲೆಗಳ ಭದ್ರತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ. ಬದಲಾಗಿ ಶಾಲೆಗಳನ್ನು ವಿಲೀನಗೊಳಿಸುವ ಹಾಗೂ ಮುಚ್ಚುವ ಪ್ರಯತ್ನಗಳೇ ಹೆಚ್ಚೆಚ್ಚು ನಡೆದಿವೆ. ಅಳಿವಿನ ಅಂಚಿನಲ್ಲಿರುವ ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರ ತೋರುತ್ತಿರುವ ಬೇಜವಾಬ್ದಾರಿ ಈ ಬಡ ಹೆಣ್ಣು ಮಕ್ಕಳ ಸಾವಿಗೆ ಕಾರಣವಾಗಿದೆ.