ಡಿವಿಜಿ ಅವರ ‘ಮಂಕುತಿಮ್ಮನ ಕಗ್ಗ’ದಲ್ಲಿ ಒಂದು ಪದ್ಯದ ವಿವರ ಹೀಗಿದೆ: ‘ಜನಕಜೆಯನ್ನು ನೋಡಿ ರಾವಣನಿಗೆ ಚಪಲವಾಯಿತು; ಕನಕ ಮೃಗವನ್ನು ನೋಡಿ ಜಾನಕಿಗೆ ಚಪಲವಾಯಿತು. ಆದರೆ ಜನ, ರಾವಣನನ್ನು ನಿಂದಿಸುತ್ತಾರೆ, ಸೀತೆಯನ್ನು ಮನ್ನಿಸುತ್ತಾರೆ. ಈ ಮನದ ಬಗೆ ಅರಿಯದು’.
ಕರ್ನಾಟಕದಲ್ಲಿ ಈಚೆಗೆ ನಡೆದ ವಿದ್ಯಮಾನಗಳನ್ನು ಕಂಡು ನನಗೆ ಈ ಪದ್ಯವು ನೆನಪಿಗೆ ಬರುತ್ತಿದೆ. ಇಲ್ಲದ ಬಹುಮತವನ್ನು ಹೇಗಾದರೂ ಪಡೆದುಕೊಳ್ಳುವುದು ಒಂದು ಪಕ್ಷದವರಿಗೆ ‘ತಪ್ಪಲ್ಲ’ ಎನ್ನಿಸಿತು. ಅವರನ್ನು ಬೆಂಬಲಿಸುವವರಿಗೆ ಆ ಪಕ್ಷದವರು ಏನು ಮಾಡಿದರೂ ಸರಿ ಎನ್ನಿಸಿತು. ಕಳ್ಳತನ ತಪ್ಪು ಎಂದು ಹೇಳುವವರು ತಮಗೆ ಬೇಕಾದವರು ಕದ್ದರೆ ‘ಅದು ಅನಿವಾರ್ಯವಾಗಿತ್ತು’ ಎಂದು ಸಮರ್ಥಿಸಿಕೊಳ್ಳುವುದು ಕಂಡಿತು.
ಅಕ್ರಮ ಅಥವಾ ಭ್ರಷ್ಟತೆಯನ್ನು ಹೇಗೆ ಮತ್ತು ಯಾರು ನೋಡುತ್ತಾರೋ ಹಾಗೆ ವ್ಯಾಖ್ಯೆಗೆ ಅದು ಒಳಗಾಗುತ್ತದೆಯೇ? ಭ್ರಷ್ಟತೆಗೆ ವ್ಯಾಖ್ಯೆ ಏನು ಹಾಗಾದರೆ?
‘ಜನ ಇದ್ದ ಹಾಗೆ ಸರ್ಕಾರ ಇರುತ್ತದೆ. ಸರ್ಕಾರ ಜನರ ನೆರಳು’ ಎಂದು ವಿನೋಬಾ ಭಾವೆಯವರು ಹೇಳಿದ್ದು ಈಗ ಸ್ಫುಟಗೊಂಡಿದೆ.