ರಾಜಕೀಯ ಪಕ್ಷಗಳಿಗೆ ಸಿಂಹ ಸ್ವಪ್ನವಾಗಿರುವ ಚುನಾವಣಾ ಆಯೋಗವು ನಾಗರಿಕ ಸಮಾಜದ ಉಳಿವಿಗಾಗಿ ಇತ್ತೀಚಿನ ದಿನಮಾನಗಳಲ್ಲಿ ಉತ್ತಮ ಕ್ರಮಗಳನ್ನು ಕೈಗೊಳ್ಳುತ್ತಿದೆ ಎನ್ನುವುದಕ್ಕೆ ಎರಡು ಮಾತಿಲ್ಲ.
ಕಟೌಟ್ಗಳಿಂದ ರಾಜಕಾರಣಿಗಳು ನಗರಗಳನ್ನೆಲ್ಲಾ ಗಬ್ಬೆಬ್ಬಿಸುವುದಕ್ಕೆ, ಮನೆ ಮನೆಗೆ ತೆರಳಿ ರಾಜಕೀಯ ಪಕ್ಷಗಳು ಪ್ರಚಾರದಿಂದಲೇ ಗುರುತಿನ ಚೀಟಿಯನ್ನು ನೀಡುವುದಕ್ಕೆ ತಡೆ, ಮನೆಬಾಗಿಲಿಗೆ ಆಯೋಗವೇ ಬಂದು ಚೀಟಿಯನ್ನು ನೀಡುವ ಕ್ರಮ ಹಾಗೂ ಮತಗಟ್ಟೆ ಕೇಂದ್ರಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಿರುವುದು ಉತ್ತಮ ಬೆಳವಣಿಗೆ.
ಹಾಗೆಯೇ ದುಡ್ಡಿಗಾಗಿ ಏನಾದ್ರೂ ಬರವಣಿಗೆ ಬರೆಯುವ ಮಾಧ್ಯಮಗಳ ಅನಿಷ್ಟ ಪದ್ಧತಿ `ಕಾಸಿಗಾಗಿ ಸುದ್ದಿ' ಎಂಬ ಆಧುನಿಕ ಕಾಲದ ಹೊಸ ಪ್ರಯೋಗಕ್ಕೆ ಆಯೋಗದ ಸೂಕ್ತ ಕ್ರಮವು ರಾಜಕಾರಣಿಗಳಿಗೆ ತಕ್ಕ ಪಾಠವಾಗಿದೆ. ಎಲ್ಲವನ್ನು ಆಯೋಗದಿಂದಲೇ ತಡೆಯುವುದು ಅಸಾಧ್ಯ. ರಾಜಕೀಯವನ್ನು ಉದ್ಯಮವನ್ನಾಗಿ ಮಾಡಿರುವವರಿಗೆ, ದುಡ್ಡಿದ್ದರೆ ಏನು ಬೇಕಾದ್ರೂ ಮಾಡಬಹುದು ಎಂಬ ಹಂಬಲದೊಂದಿಗೆ ಅಧಿಕಾರ ದಾಹ ಪ್ರದರ್ಶಿಸುತ್ತಿರುವ ಭ್ರಷ್ಟ ರಾಜಕಾರಣಿಗಳಿಗೆ ಬುದ್ಧಿ ಕಲಿಸುವ ಅವಕಾಶವನ್ನು ಆಯೋಗ ಮತದಾರರಿಗೆ ನೀಡಿದೆ.