ಹಿಂದುಳಿದ ವರ್ಗಗಳ ಆಯೋಗ ನಡೆಸಲಿರುವ ಜಾತಿ ಜನಗಣತಿಯಿಂದ ಮತಾಂತರಕ್ಕೆ ಪ್ರೇರಣೆ ದೊರೆಯಲಿದೆ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆ (ಪ್ರ.ವಾ., ನ. 26) ಹಾಸ್ಯಾಸ್ಪದವಾಗಿದೆ. ಸಂವಿಧಾನದ ನಿಯಮಾನುಸಾರ ಸ್ಥಾಪಿಸಿರುವ ಯಾವುದೇ ಆಯೋಗ, ಮತಾಂತರದಂತಹ ಗಂಭೀರ ಸಾಮಾಜಿಕ ವಿಚಾರವನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ.
ಹಿಂದುಳಿದ ವರ್ಗಗಳ ಆಯೋಗ ಜನಗಣತಿಗಾಗಿ ಸಿದ್ಧಪಡಿಸಿರುವ ಪ್ರಶ್ನಾವಳಿಯಲ್ಲಿ ಮತಾಂತರವಾದವರ ಬಗ್ಗೆ ಮಾಹಿತಿಯನ್ನು ಪಡೆಯುತ್ತಿರುವುದು ಸಾಂವಿಧಾನಿಕ ವಿರೋಧಿ ನಡೆಯಲ್ಲ. ಪರಿಶಿಷ್ಟರಿಂದ ಕ್ರೈಸ್ತ ಧರ್ಮಕ್ಕೆ ಮತಾಂತರವಾದವರನ್ನು ಹಿಂದುಳಿದ ವರ್ಗವಾಗಿ ಗುರುತಿಸುವ ರೂಢಿ ಹಾವನೂರು ಆಯೋಗದ ಕಾಲದಿಂದಲೂ ನಡೆದಿದೆ.
ಪ್ರಸ್ತುತ ಜನಗಣತಿ ಪ್ರಕ್ರಿಯೆಗಳು ಹಿಂದಿನ ಸಂಪ್ರದಾಯಗಳನ್ನು ಮುಂದುವರಿಸಿವೆ ಅಷ್ಟೆ. ವಿವಿಧ ರಾಜ್ಯ ಸರ್ಕಾರಗಳ ಹಿಂದುಳಿದ ವರ್ಗಗಳ ಆಯೋಗಗಳು ಮತ್ತು ಕೇಂದ್ರ ಸರ್ಕಾರದ ಆಯೋಗ ಸಹ ಈ ರೀತಿಯ ಸಂಪ್ರದಾಯವನ್ನು ಪಾಲಿಸುತ್ತಿವೆ. ಪರಿಶಿಷ್ಟ ಸಮೂಹದಿಂದ ಒಮ್ಮೆ ಮತಾಂತರವಾದವರನ್ನು ಅವರ ಮೂಲಜಾತಿಯವರನ್ನಾಗಿ ಗುರುತಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಅಥವಾ ಮತಾಂತರ ಕಾರಣಕ್ಕಾಗಿ ಸೇಡಿನ ಕ್ರಮವಾಗಿ ಅವರಿಗೆ ಹಕ್ಕುಗಳನ್ನು ನಿರಾಕರಿಸುವಂತಿಲ್ಲ. ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಪ್ರಶ್ನಾವಳಿಯು ಮತಾಂತರವನ್ನು ಪ್ರೋತ್ಸಾಹಿಸುತ್ತದೆ ಅನ್ನುವುದು ಸಂಪೂರ್ಣ ಸುಳ್ಳು.