ಯಾವ ಅಭ್ಯರ್ಥಿಯೇ ಆಗಲಿ, ಚುನಾವಣೆಗೆ ನಿಲ್ಲುವ ಮುನ್ನ ಎರಡು ಬಲಾಬಲಗಳನ್ನು ಗ್ರಹಿಸಿರುತ್ತಾನೆ! ಒಂದು ತನ್ನದೇ ವ್ಯಕ್ತಿತ್ವದ ಬಲ, ಮತ್ತೊಂದು ತಾನು ಒಪ್ಪಿಕೊಂಡಿರುವ ಸಿದ್ಧಾಂತವನ್ನು ಪಾಲಿಸುತ್ತಿರುವ ರಾಜಕೀಯ ಪಕ್ಷದ ಹಣದ ಬೆಂಬಲ. ಹಾಗಿದ್ದು ಇವೆರಡಕ್ಕೂ ಅವನು ಶಾಸಕನಾಗಿರುವವರೆಗೂ ಋಣಿಯಾಗಿರಲೇಬೇಕು.
ಯಾವುದೇ ಕಾರಣಕ್ಕೆ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾದರೆ ಮೊದಲು ತನ್ನನ್ನು ಗೆಲ್ಲಿಸಿದ ಕ್ಷೇತ್ರದ ಜನರ ಒಪ್ಪಿಗೆಯನ್ನು ಪಡೆಯಬೇಕು. ಈ ಒಪ್ಪಿಗೆ ಪಡೆಯಬೇಕಾದರೆ ತನಗೆ ಬೆಂಬಲ ಸೂಚಿಸಿದ ಸಂಘ ಸಂಸ್ಥೆಗಳ ಜೊತೆ ಚರ್ಚೆ ನಡೆಸಬೇಕು. ಅವರು ಬಹುಮತದಿಂದ ಒಪ್ಪಿಗೆ ಕೊಟ್ಟರೆ ಮಾತ್ರ ರಾಜೀನಾಮೆ ಕೊಡಲು ಮೊದಲ ಸುತ್ತಿನಲ್ಲಿ ಗೆದ್ದಂತೆ.
ಇನ್ನು ಎರಡನೆಯ ಬೆಂಬಲದ ವಿಚಾರ. ಈಗ ಸಾಕಷ್ಟು ಕೆಟ್ಟಿರುವ ಚುನಾವಣಾ ವಾತಾವರಣದಲ್ಲಿ, ಒಪ್ಪಿಕೊಂಡಿರುವ ಸಿದ್ಧಾಂತವಲ್ಲದೇ ಹಣದ ಬೆಂಬಲ ಅತ್ಯಗತ್ಯ. ಹಾಗೆ ಪಡೆದಂತ ಬೆಂಬಲ ಅಷ್ಟು ಸುಲಭವಾಗಿ ಕಳಚುಕೊಳ್ಳುವಂತಿಲ್ಲ. ಅದು ವಾಪಸ್ಸು ಮಾಡುವಂತಹುದೂ ಅಲ್ಲ ಏಕೆಂದರೆ, ಅದಕ್ಕೆ ಲೆಕ್ಕಪತ್ರ ಏನೂ ಇರುವುದಿಲ್ಲ. ಹಾಗೂ ಒಂದು ವೇಳೆ ಅದು ಸಾಧ್ಯವಾದರೆ ಇನ್ನೊಂದು ಪಕ್ಷ ಸೇರಬೇಕಾದರೆ ಹಿಂದೆ ಹೇಳಿದ ಸಾಧಕ ಬಾಧಕಗಳನ್ನೆಲ್ಲ ಅನುಕರಿಸಬೇಕು. ಹಾಗಿರುವಾಗ ಅದನ್ನು ಕ್ಷೇತ್ರದ ಜನತೆ ಒಪ್ಪುತ್ತದೆಯೆ? ಇದಾವುದನ್ನೂ ಗಮನಕ್ಕೆ ತಂದುಕೊಳ್ಳದೆ ಬೇಕಾಬಿಟ್ಟಿಯಾಗಿ ರಾಜೀನಾಮೆ ಕೊಡುವುದು, ಪಕ್ಷದ ಸಿದ್ಧಾಂತವನ್ನೂ ಅದರ ಕಾರ್ಯಕ್ಷಮತೆಯನ್ನೂ ಸೂಕ್ಷ್ಮವಾಗಿ ಗಮನಿಸದೆ ಬೇರೊಂದು ಪಕ್ಷ ಸೇರುವುದೂ ಅಕ್ಷಮ್ಯ ಅಪರಾಧ ಅಲ್ಲವೇ ಪ್ರಜಾಪ್ರಭುತ್ವದಲ್ಲಿ?