ಧಾರವಾಡ ‘ಸಾಹಿತ್ಯ ಸಂಭ್ರಮ’ದ ಕೊನೆಯ ದಿನ ನಡೆದ ‘ಸತ್ಯದೊಂದಿಗೆ ಪ್ರಯೋಗ’ (ಕನ್ನಡ ಆತ್ಮಕಥೆಗಳು) ಗೋಷ್ಠಿಯಲ್ಲಿ ಆತ್ಮಕಥೆಗಳು ಪೂರ್ತಿ ಸತ್ಯವಲ್ಲ ಎಂಬ ಸಂಗತಿ ಚರ್ಚೆಗೆ ಒಳಗಾಯಿತು. ಆದರೆ ರಾಜಕಾರಣಿಗಳು, ಕೋಟ್ಯಧೀಶರಿಗಿಂತ ದಲಿತರು, ದಮನಿತರು, ನೊಂದವರು ಮತ್ತು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ಆತ್ಮಕಥೆಗಳು ಸತ್ಯಕ್ಕೆ ಹೆಚ್ಚು ಸಮೀಪವಾಗಿರುವುದು ನಿಜ.
ಆದರೆ ಹೆಣ್ಣು ಏನೇ ಮಾಡಿದರೂ ಅದಕ್ಕೆ ಪುರುಷ ಜಗತ್ತಿನಿಂದ ವಿರೋಧ ಎದುರಾಗುತ್ತದೆ. ಆಕೆ ತನ್ನ ಜೀವನದಲ್ಲಿ ನಡೆದ ಸತ್ಯ ಘಟನೆಗಳನ್ನು ಮುಚ್ಚುಮರೆಯಿಲ್ಲದೆ ಓದುವ ಜಗತ್ತಿಗೆ ಬಿಚ್ಚಿಟ್ಟರೆ ಅದು ವರವೂ ಆಗಬಹುದು ಅಥವಾ ಶಾಪವೂ ಆಗಬಹುದು. ಗಂಡ ಅನುಮಾನದ ಪಿಶಾಚಿ ಆಗಿದ್ದರೆ ಕೊನೆಗೆ ಸಿಗುವುದು ವಿಚ್ಛೇದನ. ಇಂತಹ ಸಂದರ್ಭದಲ್ಲಿ ಸಂಪೂರ್ಣ ಸತ್ಯವನ್ನು ಒಳಗೊಂಡ ಆತ್ಮಕಥೆಗಳು ಹುಟ್ಟಿಕೊಳ್ಳುವುದು ಎಲ್ಲಿಂದ ಮತ್ತು ಯಾರಿಂದ ಎನ್ನುವಂಥ ಪ್ರಶ್ನೆಗಳು ಕಾಡುತ್ತವೆ.