ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದಕ್ಕೆ ನಿರ್ದಿಷ್ಟವಾಗಿ ಇವರೇ ಹೊಣೆ ಎಂದು ಹೇಳಲಾಗದು. ಬದುಕನ್ನು ಎದುರಿಸಬೇಕು. ಸಾಲದ ಬಾಧೆ ಎಂದು ಆತ್ಮಹತ್ಯೆ ಮಾಡಿಕೊಂಡರೆ ಕಳೆದುಹೋದ ಜೀವ ಮರಳಿ ಬರುವುದೆ?
ಪುರಂದರದಾಸರು ಹೇಳಿದಂತೆ ‘ಈಸಬೇಕು ಇದ್ದು ಜಯಿಸಬೇಕು’. ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗುವಂತಾದರೆ ಈ ಸಮಸ್ಯೆ ಬಹುಮಟ್ಟಿಗೆ ಪರಿಹಾರ ಕಾಣುತ್ತದೆ. ಆದರೆ ನಮ್ಮ ಒಟ್ಟಾರೆ ವ್ಯವಸ್ಥೆಗೆ ಇದು ಬೇಡವಾಗಿದೆ. ರೈತರು ಸಂಘಟಿತರಾಗುವುದೊಂದೇ ಈಗ ಕಾಣುತ್ತಿರುವ ಪರಿಹಾರ ಮಾರ್ಗ. ರೈತ ಸಮುದಾಯಕ್ಕೆ ಕಷ್ಟ ಹೊಸದೇನೂ ಅಲ್ಲ. ಬಂದದ್ದು ಬರಲಿ. ಆತ್ಮಹತ್ಯೆಗೆ ಶರಣಾಗುವುದು ಬೇಡ.