ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದವರಲ್ಲಿ ಮೂವರ ಮೂರು ನಾಮಪತ್ರಗಳು ತಿರಸ್ಕೃತಗೊಂಡಿವೆ.
ಒಟ್ಟು 17 ಅಭ್ಯರ್ಥಿಗಳಿಂದ 27 ಉಮೇದುವಾರಿಕೆಗಳು ಜಿಲ್ಲಾ ಚುನಾವಣಾ ಅಧಿಕಾರಿಗೆ ಸಲ್ಲಿಕೆಯಾಗಿದ್ದವು.
ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ನಿಯಮದ ಪ್ರಕಾರ 10 ಅನುಮೋದಕರು ಹಾಗೂ ಒಬ್ಬರು ಸೂಚಕರನ್ನು ಸೂಚಿಸಬೇಕು. ಆದರೆ, ಪಕ್ಷೇತರರಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದ ಪ್ರಮೋದ್ ಮಡಗಾಂವಕರ್ ಅವರು ನೀಡಿದ್ದ ಅನುಮೋದಕರಲ್ಲಿ ನಾಲ್ವರ ಹೆಸರು ಮತದಾರರ ಪಟ್ಟಿಯಲ್ಲಿಲ್ಲ. ಹೀಗಾಗಿ ತಿರಸ್ಕೃತವಾಗಿವೆ.
ಶಿವಸೇನೆಯ ಕೃಷ್ಣಾಜಿ ಪಾಟೀಲ್ ಅವರು ಸ್ವ ಅನುಮೋದಕರಾಗಿ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವರ ಉಮೇದುವಾರಿಕೆಯೂ ತಿರಸ್ಕೃತಗೊಂಡಿದೆ.
ಮೂರು ನಾಮಪತ್ರ ಸಲ್ಲಿಕೆ ಮಾಡಿದ್ದ ಬಾಲಕೃಷ್ಣ ಪಾಟೀಲ್ ಅವರ ಮೊದಲ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಮೂಲಗಳು ತಿಳಿಸಿವೆ.