ಹೈಸ್ಕೂಲ್ನಲ್ಲಿ ಪಾಠ ಮಾಡುವ ಕನ್ನಡ ಮಾಸ್ತರರಿಗೆ ಕಿಲಾಡಿ ಕಿಟ್ಟಿಯದೇ ದೊಡ್ಡ ಚಿಂತೆ, ಬುದ್ಧಿವಂತನಾದರೂ ಅವನು ಮಾಡುವ ತರಲೆ ಕೆಲಸಗಳು ಮಾಸ್ತರರಿಗೆ ಸಿಟ್ಟು ನೆತ್ತಿಗೇರುವಂತೆ ಮಾಡುತ್ತಿದ್ದವು. ಒಮ್ಮೆ ಅವನು ಮಾವಿನಕಾಯಿಗೆ ಹೊಡೆದ ಕಲ್ಲು ಅಕಸ್ಮಾತ್ ಆಗಿ ಮಾಸ್ತರರ ಬೋಳು ತಲೆಗೆ ಬಡಿದು ದೊಡ್ಡ ‘ಆಲೂಗಡ್ಡೆ’ಯೇ ಮೂಡಿತ್ತು. ಅಂದಿನಿಂದ ಮಾಸ್ತರರ ಹೆಸರು ಆಲೂಗಡ್ಡೆ ಮಾಸ್ತರ್ ಎಂದೇ ರೂಢಿಯಾಗಿತ್ತು.
ಒಂದು ದಿನ ಮಾಸ್ತರರು ತರಗತಿಯಲ್ಲಿ ಪಾಠ ಮಾಡುತ್ತಿದ್ದರು. ಪಾಠ ಕೇಳದೇ ಗಲಾಟೆ ಮಾಡುತ್ತಿದ್ದ ಕಿಟ್ಟಿಯನ್ನು ಎಬ್ಬಿಸಿ ಏ.. ಕಿಟ್ಟಿ ನೀನು ಹೇಳು ಕುಂತಿ-ಕರ್ಣನನ್ನು ಭೇಟಿಯಾಗಿ ‘ಬಿಟ್ಟ ಬಾಣವನ್ನು ಮತ್ತೆ ಬಿಡಬೇಡ’ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ - ‘ಈ ಸನ್ನಿವೇಶದಲ್ಲಿ ಯಾವ ರಸ ಇದೆಯೋ’ ಎಂದು ಕೇಳುತ್ತಾರೆ. ಅದಕ್ಕೆ ಕಿಟ್ಟಿ, ಬಿಟ್ಟ ಬಾಣದಂತೆ ಉತ್ತರಿಸಿದ ‘‘ಸಾರ್ ಕುಂತಿ ಕರ್ಣನನ್ನು ‘ನೈಸ್’ ಮಾಡಿ ತನ್ನ ಕೆಲಸ ಮಾಡಿಸಿಕೊಳ್ಳುತ್ತಿದ್ದಾಳೆ. ಇದು ಖಂಡಿತವಾಗಿಯೂ ‘ನೈಸ್’ ರಸ ಸಾರ್, ನೈಸ್ ರಸ’’.