ನವದೆಹಲಿ: ಡೆಹ್ರಾಡೂನ್ನ ‘ಅಭಿಮನ್ಯು ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣ’ದಲ್ಲಿ ಬಂಗಾಳ ಮತ್ತು ಉತ್ತರಾಖಂಡ ತಂಡಗಳ ನಡುವೆ ಮಂಗಳವಾರ ಆರಂಭವಾಗಲಿರುವ ರಣಜಿ ಕ್ರಿಕೆಟ್ ಪಂದ್ಯ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲಿದೆ.
ಬಂಗಾಳ ತಂಡದ ಬ್ಯಾಟರ್ ಅಭಿಮನ್ಯು ಈಶ್ವರನ್, ತಮ್ಮದೇ ಹೆಸರಿನ ಕ್ರೀಡಾಂಗಣದಲ್ಲಿ ಆಡಲಿದ್ದಾರೆ. ಈ ಕ್ರೀಡಾಂಗಣವನ್ನು ನಿರ್ಮಿಸಿರುವುದು ಅಭಿಮನ್ಯು ಅವರ ಅಪ್ಪ ರಂಗನಾಥನ್ ಪರಮೇಶ್ವರನ್ ಈಶ್ವರನ್.
ರಂಗನಾಥನ್ ಅವರು ಕ್ರೀಡಾಂಗಣ ನಿರ್ಮಾಣಕ್ಕಾಗಿ 2005 ರಲ್ಲಿ ಡೆಹ್ರಾಡೂನ್ನಲ್ಲಿ ಜಮೀನು ಖರೀದಿಸಿದ್ದರು. ಸ್ವಂತ ಖರ್ಚಿನಲ್ಲಿ ಕ್ರೀಡಾಂಗಣ ನಿರ್ಮಿಸಿದ್ದರು. ಬಳಿಕ ಮಗನ ಹೆಸರನ್ನೇ ಇಟ್ಟಿದ್ದರು. ಅಪ್ಪ ಕಟ್ಟಿಸಿರುವ ಕ್ರೀಡಾಂಗಣದಲ್ಲಿ ಆಡುವ ಅಪೂರ್ವ ಅವಕಾಶ ಇದೀಗ ಮಗನಿಗೆ ದೊರೆತಿದೆ.
‘ನಾನು ಆಡಿ ಬೆಳೆದ ಅಂಗಳದಲ್ಲಿ ರಣಜಿ ಪಂದ್ಯ ಆಡುತ್ತಿರುವುದು ಹೆಮ್ಮೆಯ ವಿಚಾರ. ತಂದೆಯವರು ಕ್ರಿಕೆಟ್ ಮೇಲೆ ಹೊಂದಿದ್ದ ಪ್ರೀತಿಯಿಂದ ಈ ಕ್ರೀಡಾಂಗಣ ನಿರ್ಮಾಣವಾಗಿದೆ’ ಎಂದು 27 ವರ್ಷದ ಅಭಿಮನ್ಯು ಪ್ರತಿಕ್ರಿಯಿಸಿದ್ದಾರೆ.
‘ಕ್ರೀಡಾಂಗಣ ನಿರ್ಮಾಣ 2006 ರಲ್ಲಿ ಆರಂಭವಾಗಿತ್ತು. ಈಗಲೂ ಆಧುನೀಕರಣಕ್ಕಾಗಿ ಹಣ ಖರ್ಚು ಮಾಡುತ್ತಿದ್ದೇನೆ. ಕ್ರಿಕೆಟ್ ಮೇಲಿನ ಪ್ರೀತಿಯಿಂದ ಕ್ರೀಡಾಂಗಣ ನಿರ್ಮಿಸಿದ್ದೇನೆಯೇ ಹೊರತು, ಮಗನಿಗಾಗಿ ಅಲ್ಲ’ ಎಂಬುದು ರಂಗನಾಥನ್ ಹೇಳಿಕೆ.