ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿಶ್ವಕಪ್ ಅವಕಾಶವಂಚಿತ ಅಂಬಟಿ ರಾಯುಡು ನಿವೃತ್ತಿ

ನಿಗದಿಯ ಓವರ್‌ಗಳ ‍ಪರಿಣತ ಬ್ಯಾಟ್ಸ್‌ಮನ್
Last Updated 3 ಜುಲೈ 2019, 19:27 IST
ಅಕ್ಷರ ಗಾತ್ರ

ನವದೆಹಲಿ:ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆಯದ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಬುಧವಾರ ನಿವೃತ್ತಿ ಘೋಷಿಸಿದ್ದಾರೆ.

33 ವರ್ಷದ ರಾಯುಡು ಅವರು ಭಾರತ ತಂಡದ ಕಾಯ್ದಿಟ್ಟ ಆಟಗಾರರ ಯಾದಿಯಲ್ಲಿದ್ದರು. ಆದರೆ ವಿಜಯಶಂಕರ್ ಅವರು ಗಾಯಗೊಂಡು ಟೂರ್ನಿಯಿಂದ ಹೊರಬಿದ್ಧಾಗಲೂ ರಾಯುಡುಗೆ ಅವಕಾಶ ಕೊಡಲಿಲ್ಲ. ಕರ್ನಾಟಕದ ಮಯಂಕ್ ಅಗರವಾಲ್ ಅವರನ್ನು ಆಯ್ಕೆ ಮಾಡಲಾಯಿತು. ಇದರಿಂದಾಗಿ ಬೇಸರಗೊಂಡ ರಾಯುಡು ನಿವೃತ್ತಿಯ ನಿರ್ಧಾರ ಮಾಡಿದ್ದಾರೆಂದು ಬಿಸಿಸಿಐ ಮೂಲಗಳು ಹೇಳಿವೆ.

‘ಅಂಬಟಿ ಇಂದು ಬೆಳಿಗ್ಗೆ ನಮಗೆ ತಮ್ಮ ವಿದಾಯ ಪತ್ರವನ್ನು ಇಮೇಲ್ ಮಾಡಿದ್ದಾರೆ. ಅದರಲ್ಲಿ ಕಾರಣವನ್ನು ಉಲ್ಲೇಖಿಸಿಲ್ಲ. ತಾವು ಆಡಿದ ಸಮಯದಲ್ಲಿ ತಂಡದ ನಾಯಕರಾಗಿದ್ದವರಿಗೆ ಮತ್ತು ಬಿಸಿಸಿಐಗೆ ಕೃತಜ್ಞತೆ ಸಲ್ಲಿಸಿದ್ದಾರೆ’ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಾಗಿ ನಡೆದ ಚರ್ಚೆಯಲ್ಲಿ ರಾಯುಡು ಹೆಸರು ಮುಂಚೂಣಿಯಲ್ಲಿತ್ತು. ಆದರೆ 15 ಆಟಗಾರರ ತಂಡ ಪ್ರಕಟವಾದಾಗ ಅವರ ಹೆಸರು ಇರಲಿಲ್ಲ. ತಮಿಳುನಾಡಿನ ವಿಜಯಶಂಕರ್ ಅವರಿಗೆ ಅವಕಾಶ ನೀಡಲಾಗಿತ್ತು.

‘ತ್ರಿವಿಧ ಕೌಶಲ್ಯಗಳು (ಬ್ಯಾಟಿಂಗ್, ಮಧ್ಯಮವೇಗದ ಬೌಲಿಂಗ್ ಮತ್ತು ಫೀಲ್ಡಿಂಗ್) ಇರುವುದರಿಂದ ವಿಜಯಶಂಕರ್‌ಗೆ ಅವಕಾಶ ನೀಡಲಾಗಿದೆ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್ ಆಗ ಸಮರ್ಥಿಸಿಕೊಂಡಿದ್ದರು.

‘ನಾನು ತ್ರೀ ಡಿ ಕನ್ನಡಕ ಹಾಕಿಕೊಂಡು ವಿಶ್ವಕಪ್ ಟೂರ್ನಿ ನೋಡಲು ಸಜ್ಜಾಗಿದ್ದೇನೆ’ ಎಂದು ಅಂಬಟಿ ಅವರು ಪ್ರಸಾದ್‌ಗೆ ಟ್ವೀಟ್‌ ಮೂಲಕ ತಿರುಗೇಟು ಕೊಟ್ಟಿದ್ದರು.

ಅದರ ನಂತರ ಕಾಯ್ದಿಟ್ಟ ಆಟಗಾರರಲ್ಲಿ ಅಂಬಟಿ ಮತ್ತು ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಲಾಗಿತ್ತು.

ತಮ್ಮ ವೃತ್ತಿಜೀವನದಲ್ಲಿ ಹಲವಾರು ವಿವಾದಗಳು ಅವರನ್ನು ಸುತ್ತುವರಿದಿದ್ದವು. 2007ರಲ್ಲಿ ಬಿಸಿಸಿಐನಿಂದ ನಿರ್ಬಂಧಿತವಾಗಿದ್ದ ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್) ಟೂರ್ನಿಯಲ್ಲಿ ಆಡಿದ್ದರು. ಆದ್ದರಿಂದ ಅಗಲೇ ಅವರನ್ನು ಭಾರತ ತಂಡದ ಆಯ್ಕೆಯಿಂದ ಹೊರಗಿಡಲಾಗಿತ್ತು. 2009ರಲ್ಲಿ ಐಸಿಎಲ್ ಆಡಿದ 79 ಆಟಗಾರರ ಮೇಲಿನ ನಿರ್ಬಂಧ ಸಡಿಲಿಸಲಾಯಿತು. 2013ರಲ್ಲಿ ಅಂಬಟಿಗೆ ಮೊದಲ ಸಲ ಭಾರತ ತಂಡದಲ್ಲಿ ಆಡುವ ಅವಕಾಶ ದೊರೆಯಿತು. ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಪದಾರ್ಪನೆ ಮಾಡಿದರು.

ರಾಯುಡು 55 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿ, 1694 ರನ್‌ ಗಳಿಸಿದ್ದಾರೆ. ಆದರೆ, ಅವರಿಗೆ ಟೆಸ್ಟ್‌ ಆಡುವ ಅವಕಾಶ ಸಿಗಲಿಲ್ಲ.

ನಿಗದಿಯ ಓವರ್‌ಗಳ ಕ್ರಿಕೆಟ್‌ ಮೇಲೆ ಗಮನ ಕೇಂದ್ರಿಕರಿಸುವ ಸಲುವಾಗಿಯೇ ಅವರು ಹೋದ ವರ್ಷ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಅಂಪೈರ್‌ಗಳ ಜೊತೆಗೆ ಮಾತಿನ ಚಕಮಕಿ ನಡೆಸಿ ಎರಡು ಪಂದ್ಯಗಳ ನಿಷೇಧ ಅನುಭವಿಸಿದ್ದರು.

ಹೋದ ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧಧ ಏಕದಿನ ಪಂದ್ಯದಲ್ಲಿ ಅವರ ಬೌಲಿಂಗ್ ಶೈಲಿಯು ನಿಯಮಬಾಹಿರ ಎಂದು ಆರೋಪಿಸಲಾಗಿತ್ತು.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಅವರು ಮಿಂಚಿದ್ದರು. ಕಳೆದ ಎರಡು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಆಡುತ್ತಿದ್ದಾರೆ. ಅದಕ್ಕೂ ಮುನ್ನ ಮುಂಬೈ ಇಂಡಿಯನ್ಸ್‌ನಲ್ಲಿ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT