ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯಲ್ಲಿ ತೆರವಾಗಲಿರುವ ಮೂವರು ಸದಸ್ಯ ಸ್ಥಾನಗಳ ನೇಮಕಾತಿಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅರ್ಜಿ ಆಹ್ವಾನಿಸಿದೆ.
ಸದಸ್ಯರಾಗಿರುವ ದೇವಾಂಗ್ ಗಾಂಧಿ (ಪೂರ್ವ ವಲಯ), ಸರಣ್ದೀಪ್ ಸಿಂಗ್ (ಉತ್ತರ ವಲಯ) ಮತ್ತು ಜತೀನ್ ಪರಾಂಜಪೆ (ಪಶ್ಚಿಮ ವಲಯ) ಅವರ ಅವಧಿಯು ಮುಕ್ತಾಯಗೊಳ್ಳಲಿದೆ. ಅವರ ಸ್ಥಾನಕ್ಕೆ ಹೊಸ ಸದಸ್ಯರನ್ನು ನೇಮಕ ಮಾಡಲಾಗುತ್ತಿದೆ.
ಅರ್ಜಿ ಸಲ್ಲಿಸಲು ನವೆಂಬರ್ 15 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು 60 ವರ್ಷ ವಯಸ್ಸಿನೊಳಗಿನವರಿರಬೇಕು. 30 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿರುವ ಅನುಭವ ಇರಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ (ಏಳು ಟೆಸ್ಟ್ ಅಥವಾ 10 ಏಕದಿನ ಮತ್ತು 20 ಪ್ರಥಮ ದರ್ಜೆ ಪಂದ್ಯಗಳು) ಆಡಿದವರಿಗೆ ಆದ್ಯತೆ ನೀಡಲಾಗುವುದು ಎಂದು ಮಂಡಳಿತಿಳಿಸಿದೆ.
ಈ ಹಿಂದೆ ನಡೆದಿದ್ದ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗರಾದ ಅಜಿತ್ ಅಗರಕರ್ ಮತ್ತು ದೆಹಲಿಯ ಮಣಿಂದರ್ ಸಿಂಗ್ ಅರ್ಜಿ ಸಲ್ಲಿಸಿದ್ದರು. ಈ ಬಾರಿ ಅದೇ ಅರ್ಜಿಗಳನ್ನು ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಭಾರತ, ಭಾರತ ಎ, ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ, ಚಾಲೆಂಜರ್ ಟ್ರೋಫಿ ಮತ್ತು ಇರಾನಿ ಕಪ್ನಲ್ಲಿ ಆಡುವ ಇತರೆ ಭಾರತ ತಂಡಗಳನ್ನು ಆಯ್ಕೆ ಮಾಡುವ ಹೊಣೆ ಈ ಸಮಿತಿಗೆ ಇರುತ್ತದೆ. ಈ ಸಮಿತಿಗೆ ಕನ್ನಡಿಗ ಸುನೀಲ್ ಜೋಶಿ ಮುಖ್ಯಸ್ಥರಾಗಿದ್ದಾರೆ.