ನವದೆಹಲಿ: ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಸ್ಥಾನದಿಂದ ವಜಾಗೊಂಡಿರುವ ಸಂಜಯ್ ಬಂಗಾರ್ ಬಿಸಿಸಿಐನಿಂದ ವಿಚಾರಣೆಗೆ ಒಳಗಾಗುವ ಸಾಧ್ಯತೆಯಿದೆ. ರಾಷ್ಟ್ರೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಸದಸ್ಯ ದೇವಾಂಗ್ ಗಾಂಧಿ ಜೊತೆ ಅವರು ವಾಗ್ವಾದ ನಡೆಸಿದ ವರದಿಯಾಗಿತ್ತು. ತಂಡದ ಆಡಳಿತ ವ್ಯವಸ್ಥಾಪಕ ಸ್ಥಾನದಿಂದ ನಿರ್ಗಮಿಸುತ್ತಿರುವ ಸುನಿಲ್ ಸುಬ್ರಮಣಿಯನ್ ಅಥವಾ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರು, ವಾಗ್ವಾದಕ್ಕೆ ಸಂಬಂಧಿಸಿ ಅಧಿಕೃತ ವರದಿಯನ್ನು ನೀಡಿದರೆ ಬಿಸಿಸಿಐ ವಿಚಾರಣೆ ನಡೆಸಲಿದೆ.