ನವದೆಹಲಿ: ಕೋವಿಡ್–19ರಿಂದಾಗಿ ಎರಡು ವಾರಗಳಲ್ಲಿ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರು ವಿಷಾದದ ಸಂದರ್ಭದಲ್ಲಿ ಸಮಾಧಾನಪಡಿಸಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವೇದಾ ದು:ಖದ ಮಡುವಿನಲ್ಲಿದ್ದಾಗ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಮಹಿಳಾ ತಂಡವನ್ನು ಆಯ್ಕೆ ಮಾಡಲಾಗಿತ್ತು. ವೇದಾ ಅವರನ್ನು ಕೈಬಿಡಲಾಗಿತ್ತು. ಆದರೆ ಇದಕ್ಕೂ ಮುನ್ನ ಸೌಜನ್ಯಕ್ಕಾದರೂ ಅವರ ಅಭಿಪ್ರಾಯ ತಿಳಿಯಲು ಬಿಸಿಸಿಐ ಮುಂದಾಗಲಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕಿ ಲಿಸಾ ಸ್ಥಳೇಕರ್ ದೂರಿದ್ದರು.
ಇದರ ಬೆನ್ನಲ್ಲೇ ವೇದಾ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ್ದು ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಸಿಸಿಐ ತೋರಿದ ಕಾಳಜಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮಂಡಳಿಯ ಕಾರ್ಯದರ್ಶಿ ಜಯ ಶಾ ಅವರಿಗೂ ಅಭಾರಿ ಎಂದು ತಿಳಿಸಿದ್ದಾರೆ. ವೇದಾ, ಭಾರತ ಮಹಿಳಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದಾರೆ.