ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ಆರಂಭದ ಬ್ಯಾಟರ್ ಧನುಷ್ಕ ಗುಣತಿಲಕ ಅವರು ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಸೀಮಿತ ಓವರ್ಗಳ ಪಂದ್ಯಗಳಿಗೆ ಆದ್ಯತೆ ನೀಡಲು ಅವರು ಈ ತೀರ್ಮಾನ ಕೈಗೊಂಡಿರುವುದಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್ಎಲ್) ಶನಿವಾರ ತಿಳಿಸಿದೆ.
ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಿಕೆಟ್ ಆಟಗಾರರ ಮೇಲೆ ಹೇರಿದ್ದ ನಿಷೇಧವನ್ನು ಶ್ರೀಲಂಕಾ ಶುಕ್ರವಾರ ವಾಪಸ್ ತೆಗೆದುಕೊಂಡಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಗುಣತಿಲಕ ಅವರ ನಿರ್ಧಾರ ಹೊರಬಿದ್ದಿದೆ.
ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ನಿಯಮ ಉಲ್ಲಂಘಿಸಿದ್ದ ಉಪನಾಯಕ ಕುಶಾಲ್ ಮೆಂಡಿಸ್, ಆರಂಭಿಕ ಬ್ಯಾಟರ್ ಗುಣತಿಲಕ ಹಾಗೂ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ಮೇಲೆ ಒಂದು ವರ್ಷ ನಿಷೇಧ ಹೇರಲಾಗಿತ್ತು.
ಎಂಟು ಟೆಸ್ಟ್ ಪಂದ್ಯಗಳನ್ನು ಆಡಿರುವ ಗುಣತಿಲಕ 299 ರನ್ ಗಳಿಸಿದ್ದಾರೆ. ಅದರಲ್ಲಿ ಎರಡು ಅರ್ಧಶತಕಗಳು ಸೇರಿವೆ. 61 ಅವರ ಇನಿಂಗ್ಸ್ವೊಂದರ ಗರಿಷ್ಠ ರನ್.